ಬರುತ್ತಿದ್ದಾಳೆ `ಸಂಹಾರಿಣಿ’..!

ಕೋವಿಡ್ ಕಾರಣದಿಂದ ತಡವಾಗಿ ಬಿಡುಗಡೆಯಾಗುತ್ತಿರುವ ಚಿತ್ರ `ಸಂಹಾರಿಣಿ’. ಪೂಜಾಗಾಂಧಿ ಟೈಟಲ್ ರೋಲ್ ನಲ್ಲಿ ಕಾಣಿಸುತ್ತಿರುವ ಈ ಚಿತ್ರದ ನಿರ್ದೇಶಕರು ಕೆ. ಜವಾಹರ್ .”ದಂಡುಪಾಳ್ಯ ಸಿನಿಮಾದ ಬಳಿಕ ಒಳ್ಳೆಯ ಕತೆಗಾಗಿ ಕಾಯುತ್ತಿದ್ದೆ. ಸಂಹಾರಿಣಿ ನನ್ನ ಮನಸಿಗೆ ಹತ್ತಿರವಾದ ಪಾತ್ರವಾಗಿದೆ. ಹೆಣ್ಣುಮಕ್ಕಳ ಭಾವನೆಗಳನ್ನು ಈ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ. ಸಂಹಾರಿಣಿ ಆಕ್ಷನ್ ಚಿತ್ರವಾದರೂ ಭಾವನಾತ್ಮಕ ಅಂಶಗಳು ಹೆಚ್ಚು ಇವೆ. ಇಂಥ ಚಿತ್ರಗಳಲ್ಲಿ ಈ ಹಿಂದೆ ನಟಿಸಿರುವ ಮಾಲಾಶ್ರೀಯಂಥ ಆಕ್ಷನ್ ರಾಣಿಯರನ್ನು ಮೆಚ್ಚಲೇಬೇಕು. ಯಾಕೆಂದರೆ, ಅದು ತುಂಬ ಕಷ್ಟ ಎನ್ನುವುದು ಈಗ ನನಗೆ ಅರಿವಾಗಿದೆ” ಎಂದಿದ್ದಾರೆ ಪೂಜಾಗಾಂಧಿ. “ಪೂಜಾಗಾಂಧಿಗೆ ಸರಿಯಾಗಿ ಈಜು ಬರುವುದಿಲ್ಲ. ಹಾಗಾಗಿ ಜಲಪಾತದ ಬಳಿ ತೆಗೆದ ದೃಶ್ಯಗಳಲ್ಲಿ ತುಂಬ ರಿಸ್ಕ್ ಇತ್ತು. ಆದರೆ ಅವರು ನಮ್ಮೊಂದಿಗೆ ತುಂಬ ಚೆನ್ನಾಗಿ ಸಹಕರಿಸಿದರು” ಎಂದು ಸಾಹಸ ಸಂಯೋಜಕ ಮಾಸ್ ಮಾದ ತಿಳಿಸಿದರು. ಚಿತ್ರದಲ್ಲಿ ಆರು ಫೈಟ್‌ಗಳಿದ್ದು ಎಲ್ಲ ಹೊಡೆದಾಟಗಳನ್ನು ಕೂಡ ಮಾಸ್ ಮಾದ ಅವರೇ ಕಂಪೋಸ್ ಮಾಡಿದ್ದಾರೆ.

ನಿರ್ದೇಶಕ ಜವಾಹರ್ ಅವರು ಪೂಜಾಗಾಂಧಿ ಮತ್ತು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಕಿಶೋರ್ ಅವರ ಅಭಿನಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಚಿತ್ರದಲ್ಲಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಹಾಡಿರುವ ಗೀತೆಯೊಂದು ಈಗಾಗಲೇ ಜನಪ್ರಿಯವಾಗಿದ್ದು ಅವರು ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದು ತಮ್ಮ ಸಂಭ್ರಮ ಹಂಚಿಕೊಂಡರು. ಇದು ಖಂಡಿತವಾಗಿಯೂ ಯಶಸ್ವಿ ಚಿತ್ರವಾಗುವ ಭರವಸೆಯನ್ನು ನಿರ್ಮಾಪಕ ಗಂಗು ಅವರು ಹೇಳಿದರು. ಇದರಲ್ಲಿ ರಿವೈಂಜ್ ಕಂಟೆಂಟ್ ಇದೆ. ಸಿ.ಜಿ ಕೆಲಸ ಮತ್ತು ಲಾಕ್ಡೌನ್, ಕೊರೊನಾ ಕಾರಣದಿಂದಾಗಿ ಚಿತ್ರ ಸ್ವಲ್ಪ ತಡವಾಗಿದೆ. ಆದರೆ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುವ ಭರವಸೆ ಇದೆ ಎಂದರು. ಈಗಾಗಲೇ ಕನ್ನಡದಲ್ಲಿ ಎಂಟು ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ ಹ್ಯಾರಿ ಜೋಶ್ ಈ ಚಿತ್ರದಲ್ಲಿ ಖಳನಟನಾಗಿದ್ದಾರೆ. “ನನಗೆ ಪೂಜಾಗಾಂಧಿಯಿಂದ ಹೊಡೆತ ತಿನ್ನುವ ದೃಶ್ಯಗಳಿವೆ. ಆದರೆ ಚಿತ್ರತಂಡದೊಂದಿಗೆ ತುಂಬ ಆತ್ಮೀಯವಾದ ದಿನಗಳನ್ನು ಕಳೆಯಲು ಸಾಧ್ಯವಾಯ್ತು” ಎಂದು ಹ್ಯಾರಿಜೋಶ್ ಹೇಳಿದರು.

ಚಿತ್ರದ ಮತ್ತೋರ್ವ ನಿರ್ಮಾಪಕರಾದ ಶಬರೀಶ್ ಮಾತನಾಡಿ ನಿರ್ದೇಶಕರು ಒಳ್ಳೆಯ ಕತೆಯೊಂದನ್ನು ತೆರೆಗೆ ತಂದಿದ್ದಾರೆ. ಪೂಜಾಗಾಂಧಿಯವರ ದಂಡುಪಾಳ್ಯ ಚಿತ್ರವನ್ನು ನೋಡಿಯೇ ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಯನ್ನು ಮಾಡಲಾಯಿತು.

Exit mobile version