ಶಿವರಾಜ್ ಕುಮಾರ್ ನಾಯಕರಾಗಿರುವ 124ನೇ ಚಿತ್ರದ ಮೊದಲ ಸನ್ನಿವೇಶಕ್ಕೆ ಕಿಚ್ಚ ಸುದೀಪ ಆರಂಭ ಫಲಕ ತೋರಿಸಿದ್ದು, ಶಿವಣ್ಣನ ಪತ್ನಿ ಗೀತಾ ಶಿವರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರದ ಮಾಧ್ಯಮ ಗೋಷ್ಠಿಯ ವಿವರಗಳು ಇಲ್ಲಿವೆ.
ನನ್ನ ಚಿತ್ರಕ್ಕೆ ಶುಭ ಹಾರೈಸಲು ಬಂದಿರುವ ಸುದೀಪ ಅವರಿಗೆ ತುಂಬಾ ಧನ್ಯವಾದ ಎಂದು ಮಾತು ಆರಂಭಿಸಿದ ಶಿವರಾಜಕುಮಾರ್ “ಇದೊಂದು ಎಮೋಷನಲ್ ಲವ್ ಸ್ಟೋರಿ. ನನ್ನದು ಇದರಲ್ಲಿ ಎರಡು ರೀತಿ ಪಾತ್ರ. ನಿರ್ದೇಶಕರು ಚಿತ್ರಕಥೆ ಹೆಣೆದಿರುವ ರೀತಿ ತುಂಬಾ ಚೆನ್ನಾಗಿದೆ. ಇದೇ ಹತ್ತೊಂಬತ್ತರಿಂದ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಚಿಕ್ಕಮಗಳೂರು, ಕಾಶ್ಮೀರ, ವಾರಣಾಸಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಮೆರ್ಹಿನ್ ಫಿರ್ಜಾದ ನಾಯಕಿಯಾಗಿ ನನ್ನೊಂದಿಗೆ ನಟಿಸಲಿದ್ದಾರೆ. ನಾಸರ್, ಸಂಪತ್ ಕುಮಾರ್, ಮಂಗ್ಲಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ನನ್ನೊಂದಿಗೆ ಟಗರು ಚಿತ್ರದಲ್ಲಿ ಕೆಲಸ ಮಾಡಿದ್ದ, ಚರಣ್ ರಾಜ್ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ಆ ಚಿತ್ರದ ಛಾಯಾಗ್ರಹಕ ಮಹೇಂದ್ರ ಸಿಂಹ ಈ ಚಿತ್ರಕ್ಕೂ ಛಾಯಾಗ್ರಹಕರಾಗಿದ್ದಾರೆ” ಎಂದು ತಮ್ಮ ಪಾತ್ರ ಹಾಗೂ ಚಿತ್ರತಂಡವನ್ನು ಪರಿಚಯಿಸಿದರು. ಕೊರೊನ ಸಂದರ್ಭದಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ನಿರ್ಮಾಪರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಇದೊಂದು ಪಕ್ಕ ಎಮೋಷನಲ್ ಲವ್ ಸ್ಟೋರಿ ಅಂತ ಹೇಳಬಹುದು ಎಂದ ನಿರ್ದೇಶಕ ರಾಮ್ ಧುಲಿಪುಡಿ ಹೇಳಿದ್ದಾರೆ. ನಾಯಕಿ ಮರ್ಹಿನ್ ಫಿರ್ಜಾದ ಅವರು ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ಸೂಚಿಸಿ, ಕನ್ನಡದಲ್ಲಿ ನಟಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದರು.
ಬಾಲಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವ ನರಾಲ ಶ್ರೀನಿವಾಸ್ ರೆಡ್ಡಿ , ಶ್ರೀಕಾಂತ್ ದುಲಿಪುಡಿ ಹಾಗೂ ಸ್ವಾತಿ ವನಪಲ್ಲಿ ಅವರು ಉಪಸ್ಥಿತರಿದ್ದರು. ಕಾರ್ಯಕಾರಿ ನಿರ್ಮಾಪಕ ಕುಡಿಪುಡಿ ವಿಜಯ್ ಕುಮಾರ್, ಸಂಗೀತ ನಿರ್ದೇಶಕ ಚರಣ್ ರಾಜ್, ಛಾಯಾಗ್ರಾಹಕ ಮಹೇಂದ್ರ ಸಿಂಹ ಹಾಗೂ ಕಲಾ ನಿರ್ದೇಶಕ ರವಿ ಸಂತೆಹಕ್ಲು ತಮ್ಮ ಕಾರ್ಯಗಳ ಕುರಿತು ಮಾತನಾಡಿದರು.
ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ‘ನೀ ಸಿಗೋವರೆಗೂ’
ಚಿತ್ರ ನಿರ್ಮಾಣವಾಗಲಿದೆ. ಇದೇ ವೇದಿಕೆಯಲ್ಲಿ ನಿರ್ಮಾಪಕ ನರಾಲ ಶ್ರೀನಿವಾಸ್ ರೆಡ್ಡಿ ಅವರ ಹುಟ್ಟುಹಬ್ಬವನ್ನು ಚಿತ್ರತಂಡದೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಳ್ಳಲಾಯಿತು.