ಶ್ರೀಗಂಧದ ಮರ‌ ಕಳವು ಮಾಡುತ್ತಿದ್ದ ನಾಲ್ವರ ಬಂಧನ: 35 ಲಕ್ಷ ರೂ. ಮೌಲ್ಯದ 230 ಕೆ.ಜಿ. ಶ್ರೀಗಂಧ ವಶ

ಮೈಸೂರು, ಜ. 18: ಶ್ರೀಗಂಧದ ಮರಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ನಾಲ್ವರನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ.

ರಘು (46), ಮಂಜುನಾಥ (22), ಸೈಯದ್‌ ಗೌಸ್‌ ಮೊಹಿದ್ದೀನ್‌ (50), ಮಕ್ಬುಲ್‌ ಷರೀಫ್‌ (58) ಬಂಧಿತ ಆರೋಪಿಗಳು. ಅವರಿಂದ 35 ಲಕ್ಷ ರೂ. ಮೌಲ್ಯದ 230 ಕೆ.ಜಿ. ತೂಕದ ಶ್ರೀಗಂಧ ಹಾಗೂ ಕೃತ್ಯಕ್ಕೆ ಬಳಸಿದ್ದ ಮಚ್ಚು, ಕೊಡಲಿ, ಗರಗಸ, ಬೈಕ್‌, ತೂಕದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ನಗರದ ಬೆಲವತ್ತ ರಿಂಗ್‌ ರಸ್ತೆ ಪಕ್ಕದಲ್ಲಿರುವ ಭಾರತೀಯ ನೋಟು ಮುದ್ರಣ ಘಟಕದ ಕಾಂಪೌಂಡ್‌ನಿಂದ ಒಳಗೆ ನುಸುಳಿ ಅಲ್ಲಿರುವ ಕಾಡಿನೊಳಗೆ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ್ದರು.

ಆರ್‌ಬಿಐ ಭದ್ರತಾ ಸಿಬ್ಬಂದಿ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮೇಟಗಳ್ಳಿ ಪೊಲೀಸರು, ಗಂಧದ ಮರಗಳನ್ನು ಕತ್ತರಿಸುತ್ತಿದ್ದ ಆರೋಪಿಗಳನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ.
ರಘು ಮತ್ತು ಮಂಜುನಾಥ್‌ ಆರೋಪಿಗಳು ಕಳ್ಳತನ ಮಾಡಿದ ಶ್ರೀಗಂಧದ ತುಂಡುಗಳನ್ನು ಮಕ್ಬುಲ್‌ ಷರೀಫನಿಗೆ ಮಾರಾಟ ಮಾಡುತ್ತಿದ್ದರು. ಈತ ಅದನ್ನು ಸೈಯದ್‌ಗೆ ಮಾರುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.

Exit mobile version