ಶ್ರೀನಗರ ಗುಂಡಿನ ಚಕಮಕಿ: ೩ ಯೋಧರು ಹುತಾತ್ಮ, ೩ ಉಗ್ರರ ಹತ್ಯೆ

ಶ್ರೀನಗರ, ನ. 09: ಪಾಕ್‌ ಉಗ್ರಗಾಮಿಗಳು ಭಾರತಕ್ಕೆ ನುಸುಳುವುದು ಹೊಸತೇನಲ್ಲ. ಅದೇ ರೀತಿ ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿನ ಮಾಚಿಲ್ ಸೆಕ್ಟರ್​ನ ಎಲ್​ಒಸಿಯಲ್ಲಿ ಪಾಕಿಸ್ತಾನದ ಕಡೆಯಿಂದ ಭಾರತದ ಗಡಿಯೊಳಗೆ ನುಸುಳಲು ಉಗ್ರರು ಮಾಡಿದ ಪ್ರಯತ್ನವನ್ನು ಭಾರತದ ಭದ್ರತಾ ಪಡೆಗಳು ವಿಫಲಗೊಳಿಸಿವೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಸೇನಾಧಿಕಾರಿ ಸೇರಿದಂತೆ ನಾಲ್ವರು ಯೋಧರು ಬಲಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರೂ ಹತ್ಯೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೊನ್ನೆ ರಾತ್ರಿ ಒಂದು ಗಂಟೆಯ ಸುಮಾರಿಗೆ ಬಿಎಸ್​ಎಫ್ ಜವಾನರು ಮಾಚಿಲ್ ಸೆಕ್ಟರ್​ನಲ್ಲಿ ಗಸ್ತು ತಿರುಗುತ್ತಿದ್ದ ವೇಳೆಯಲ್ಲಿ ಎಲ್​ಒಸಿ ಬೇಲಿಯ ಬಳಿ ಸಂಶಯಾಸ್ಪದ ಚಲನವಲನಗಳು ಗಮನಕ್ಕೆ ಬಂದಿದ್ದವು. ಆಗ ಉಗ್ರರನ್ನು ಎದಿರುಗೊಂಡಾಗ ಉಗ್ರರು ಗುಂಡಿನ ದಾಳಿ ನಡೆಸಿದರೆನ್ನಲಾಗಿದೆ. ಬೆಳಗ್ಗೆ 4 ಗಂಟೆವರೆಗೂ ನಡೆದ ಗುಂಡಿನ ಕಾಳಗದಲ್ಲಿ ಒಬ್ಬ ಉಗ್ರ ಹಾಗೂ ಒಬ್ಬ ಯೋಧ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.  

ಇದಾದ ಬಳಿಕ ಹೆಚ್ಚಿನ ಭದ್ರತಾ ಪಡೆಗಳನ್ನು ಕರೆಸಲಾಯಿತು. ಒಳನುಸುಳಿದ ಉಗ್ರಗಾಮಿಗಳ ಜಾಡು ಕಂಡುಹಿಡಿಯಲು ಸರ್ವೇಲೆನ್ಸ್ ಸಾಧನಗಳನ್ನ ಬಳಸಿಕೊಳ್ಳಲಾಯಿತು. ನಿನ್ನೆ ಭಾನುವಾರ ಬೆಳಗ್ಗೆ 10:20ಕ್ಕೆ ಉಗ್ರರ ಸ್ಥಳವನ್ನು ಪತ್ತೆ ಹಚ್ಚಿ ಎದಿರುಗೊಳ್ಳಲಾಯಿತು. ಆಗ ನಡೆದ ಗುಂಡಿನ ಕಾಳಗದಲ್ಲಿ ಇನ್ನೂ ಇಬ್ಬರು ಭಯೋತ್ಪಾದಕರು ಹತರಾದರು. ಈ ವೇಳೆ ಮೂವರು ಯೋಧರ ಬಲಿದಾನವಾದರೆ, ಇಬ್ಬರಿಗೆ ಗಾಯಗಳಾಗಿವೆ ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಹೇಳಿದ್ದಾರೆ.

Exit mobile version