Bengaluru: ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case)ದಲ್ಲಿ ನಟ ದರ್ಶನ್ ರಕ್ಷಣೆಗಾಗಿ ಎಸ್.ಪಿ.ಪಿಯಾಗಿ ನೇಮಕಗೊಂಡಿರುವ ಪ್ರಸನ್ನಕುಮಾರ್ (Prasannakumar) ಅವರನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಸುದ್ದಿಗೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಸ್.ಪಿ.ಪಿ ಬದಲಾವಣೆಯ ಪ್ರಸ್ತಾವನೆ ನನ್ನ ಮುಂದೆ ಈ ವರೆಗೂ ಬಂದೇ ಇಲ್ಲ ಎಂದಿದ್ದಾರೆ.
![Politics](https://sp-ao.shortpixel.ai/client/to_webp,q_glossy,ret_img,w_1024,h_576/https://vijayatimes.com/wp-content/uploads/2024/04/siddaramaiah-pic-1024x576.webp)
ಈ ಕುರಿತು ಟ್ವೀಟ್ ಮಾಡಿರುವ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (Public Prosecutor) ಅವರನ್ನು ಬದಲಾವಣೆ ಮಾಡಲು ನನ್ನ ಮೇಲೆ ಯಾವ ಸಚಿವರಿಂದ, ಶಾಸಕರಿಂದ ಒತ್ತಡವಿಲ್ಲ. ನನ್ನ ಮೇಲೆ ಒತ್ತಡ ಹಾಕಿದರೆ ಅವೆಲ್ಲವನ್ನೂ ನಾನು ಕೇಳುವುದೂ ಇಲ್ಲ. ಈ ನೆಲದ ಕಾನೂನು ಏನು ಹೇಳುತ್ತದೆಯೋ ಅದರಂತೆ ತನಿಖೆಯಾಗುತ್ತದೆ. ಇದರಲ್ಲಿ ಒತ್ತಡವೋ ಇನ್ನೊಂದೋ ಈ ಯಾವುದಕ್ಕೂ ನಾನು ಗಮನ ಕೊಡುವವನಲ್ಲ.
ಪೊಲೀಸರಿಗೆ ಪ್ರಕರಣದ ತನಿಖೆಯಲ್ಲಿ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಎಸ್.ಪಿ.ಪಿ (SPP) ಬದಲಾವಣೆಯ ಪ್ರಸ್ತಾವನೆ ನನ್ನ ಮುಂದೆ ಈ ವರೆಗೂ ಬಂದೇ ಇಲ್ಲ. ಇದಕ್ಕೆ ಸಂಬಂಧಪಟ್ಟಂತೆ ಈಗ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಕಲ್ಪಿತ ವರದಿಗಳು. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.
ಪಕ್ಷ ಬೇಧ ಮರೆತು ಸಿಎಂ ಮೇಲೆ ಒತ್ತಡ: ನಟ ದರ್ಶನ್ (Darshan) ರಕ್ಷಣೆಗಾಗಿ ಕಾಂಗ್ರೆಸ್ ಸರ್ಕಾರದ ಕೆಲ ಸಚಿವರು ಹಾಗೂ ಬಿಜೆಪಿ (BJP) ಶಾಸಕರು ಸರ್ವರೀತಿಯಿಂದಲೂ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ತೆರೆಮರೆಯಲ್ಲಿ ನಟ ದರ್ಶನ್ ಸಿನಿಮಾ ಮೇಲೆ ಬಂಡವಾಳ ಹೂಡಿರುವ ಈ ಶಾಸಕ ಮತ್ತು ಸಚಿವರು ಹೇಗಾದರೂ ಮಾಡಿ, ದರ್ಶನ್ನನ್ನು ಜಾಮೀನಿನ ಮೇಲೆ ಹೊರತರುವ ಪ್ರಯತ್ನ ನಡೆಸಿದ್ದಾರೆ. ಈ ಮಧ್ಯೆ ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿರುವ ಪ್ರಸನ್ನಕುಮಾರ್ ಅವರು ವಾದ ಮಾಡಿದರೆ, ಈ ಕೇಸ್ನಲ್ಲಿ ಜಾಮೀನು ಹಾಗೂ ದರ್ಶನ್ ಬಿಡುಗಡೆ ಕಷ್ಟವಾಗಬಹುದು ಎಂಬ ಲೆಕ್ಕಾಚಾರದಿಂದ ಪ್ರಸನ್ನ ಕುಮಾರ್ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸ್ಥಾನದಿಂದ ಕೈಬಿಡುವಂತೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.