ಶಾರದಾಂಬೆ ದರ್ಶನ ಪಡೆದ ರಾಷ್ಟ್ರಪತಿ ಕುಟುಂಬ

ಶೃಂಗೇರಿ ಅ 9  : ರಾಷ್ಟ್ರಪತಿ ರಾಮನಾಥ ಕೋವಿಂದ್ ಶುಕ್ರವಾರ ಕುಟುಂಬ ಸಮೇತರಾಗಿ ಶೃಂಗೇರಿ ಶಾರದಾಂಬೆಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಉಭಯ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಶುಕ್ರವಾರ ಶೃಂಗೇರಿ ಕೊರಡಕಲ್ಲು ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 11:55ಕ್ಕೆ ಶೃಂಗೇರಿಗೆ ಆಗಮಿಸಿದರು. ಈ ವೇಳೆ ಶ್ರೀಮಠದ ವತಿಯಿಂದ ಆನೆ, ಅಶ್ವ ಜೊತೆಗೆ ವಾದ್ಯಗೋಷ್ಟಿಗಳ ಮೂಲಕ ಪೂರ್ಣಕುಂಭ ಕಳಶದೊಂದಿಗೆ ಸ್ವಾಗತ ಕೋರಲಾಯಿತು. ನಂತರ ನೇರವಾಗಿ ಪತ್ನಿ ಸವಿತಾ, ಮಗಳು ಸ್ವಾತಿ ಜೊತೆಗೆ ಮೊದಲು ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನವರಾತ್ರಿ ಉತ್ಸವದಲ್ಲಿ ಕೆಲಕಾಲ ಭಾಗಿಯಾಗಿ ಶಾರದಾ ಪ್ರಸಾದವನ್ನು ಸ್ವೀಕರಿಸಿದರು. ದೇವಾಲಯದ ಒಳಾಂಗಣದಲ್ಲಿರುವ ಶಕ್ತಿ ಗಣಪತಿ, ಸಕಲದೇವತಾಮಂಟಪ, ಸರ್ಣಸಿಂಹಾಸನ ಹಾಗೂ ರಥಗಳನ್ನು ವೀಕ್ಷಿಸಿದ ಬಳಿಕ ಪ್ರವಚನ ಮಂದಿರದಲ್ಲಿ 12:55ಕ್ಕೆ ಜಗದ್ಗುರು ಶ್ರೀಭಾರತೀ ತೀರ್ಥ ಮಹಾಸ್ವಾಮೀಜಿ ಹಾಗೂ ಜಗದ್ಗುರು ಶ್ರೀವಿಧುಶೇಖರಭಾರರ್ತಿ ಸ್ವಾಮೀಜಿ ಅವರಿಗೆ ಕುಟುಂಬ ಸಮೇತರಾಗಿ ಫಲ. ಪುಷಗಳನ್ನು ಅರ್ಪಿಸಿ ಉಭಯ ಶ್ರೀಗಳ ಆಶೀರ್ವಾದವನ್ನು ಪಡೆದರು. ಬಳಿಕ ನರಸಿಂಹವನದ ಗುರುನಿವಾಸದ ಸಮೀಪವಿರುವ ಅದ್ವೈತ ಸಂಶೋಧನಾ ಕೇಂದ್ರಕ್ಕೆ ರಾಷ್ಟ್ರಪತಿ ಭೇಟಿ ನೀಡಿ ಅಲ್ಲಿರುವ ಪ್ರಾಚೀನ ಗ್ರಂಥಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ 4:11ರ ಸುಮಾರಿಗೆ ಶೃಂಗೇರಿಯಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ತೆರಳಿದರು.

Exit mobile version