SSLC ವಿದ್ಯಾರ್ಥಿಗಳಿಗೆ ಶೇ 20ರಷ್ಟು ಪಠ್ಯ ಕಡಿತಕ್ಕೆ ಸರ್ಕಾರ ನಿರ್ಧಾರ

ಬೆಂಗಳೂರು ನ 27 : ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಪಠ್ಯವನ್ನು ಶೇಕಡಾ 20 ರಷ್ಟು ಕಡಿತ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ನಿರ್ಧಾರ ವಿದ್ಯಾರ್ಥಿಗಳಿಗೆ ಕೊಂಚ ನಿರಾಳತೆಯನ್ನು ಒದಗಿಸಿದೆ.ಕೋವಿಡ್‌ನಿಂದಾಗಿ ಶಾಲೆಗಳು ತಡವಾಗಿ ಆರಂಭವಾಗಿರುವುದನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಶೇಕಡ 100ರಷ್ಟು ಪಠ್ಯಕ್ರಮ ಬೋಧನೆ ಮಾಡುವುದು ಕಷ್ಟಸಾಧ್ಯ ಎಂದು ಶಿಕ್ಷಕರ ವಲಯದಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಪ್ರತಿ ವರ್ಷ 240ಕ್ಕೂ ಹೆಚ್ಚು ಬೋಧನಾ ದಿನಗಳು ಲಭಿಸುತ್ತಿದ್ದವು. ಆದರೆ, ಈ ಬಾರಿ 180 ಬೋಧನಾ ದಿನಗಳು ಮಾತ್ರ ದೊರೆತಿವೆ. ಇದರಿಂದ ವಿದ್ಯಾರ್ಥಿಗಳಿಗೆ ಪಠ್ಯ Gಬೋಧನೆಯ ಪುನರಾವರ್ತನೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದರು.  ಪಠ್ಯ ಕಡಿತಗೊಳಿಸುವ ವಿವರಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಶೀಘ್ರದಲ್ಲೇ ಪ್ರಕಟಿಸಲಿದೆ.

ಸರ್ಕಾರ ಪಠ್ಯ ಕಡಿತಗೊಳಿಸುವ ನಿರ್ಧಾರ ಪ್ರಕಟಿಸಿರುವುದರಂದ ನಿಗದಿಯಂತೆ ಪರೀಕ್ಷೆ ನಡೆದು, ಮೊದಲಿನಂತೆಯೇ ಶೈಕ್ಷಣಿಕ ವರ್ಷಗಳನ್ನು ಆರಂಭಿಸಲು ಅನುಕೂಲವಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಕೋವಿಡ್‌ನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕಡಿತವಾಗಿರುವ ಪಠ್ಯವನ್ನು ಪರೀಕ್ಷೆಗಳ ನಂತರ ಬೋಧನೆ ಮಾಡುವಂತೆ ಶಿಕ್ಷಕರಿಗೆ ಸೂಚಿಸಲಾಗುವುದು. ಇದರಿಂದ, ಪಿಯು ತರಗತಿಯ ಪಠ್ಯದ ಅಧ್ಯಯನ ಮಾಡಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

Exit mobile version