ಜಮೀರ್ ಅಕ್ರಮದಲ್ಲಿ ಸಿದ್ದರಾಮಯ್ಯ ಪಾಲೆಷ್ಟು? : ಬಿಜೆಪಿ ಪ್ರಶ್ನೆ

BJP

ನ್ಯಾಶನಲ್ ಟ್ರಾವೆಲ್ಸ್ ಬಸ್ ಓಡಿಸಿ ಜಮೀರ್ ಅಹಮ್ಮದ್‌ ಖಾನ್‌(Zameer Ahmed Khan) ಆಸ್ತಿ ಈ ಪರಿ ಏರಿಕೆಯಾಗಲು ಹೇಗೆ ಸಾಧ್ಯ? ಜಮೀರ್ ಪರವಾಗಿ ಸಿದ್ದರಾಮಯ್ಯ ಇಷ್ಟು ವಕಾಲತ್ತು ಹಾಕುವುದನ್ನು ನೋಡಿದರೆ ಇದು ಯಾರ ಕಪ್ಪು ಹಣ(Black Money) ಎಂಬ ಪ್ರಶ್ನೆ ಮೂಡುತ್ತಿದೆ. ಜಮೀರ್ ಅಹಮ್ಮದ್‌ ಖಾನ್‌ ಅಕ್ರಮದಲ್ಲಿ ಸಿದ್ದರಾಮಯ್ಯ(Siddaramaiah) ಪಾಲೆಷ್ಟು? ಎಂದು ರಾಜ್ಯ ಬಿಜೆಪಿ(State BJP) ಪ್ರಶ್ನಿಸಿದೆ.


ಈ ಕುರಿತು ಟ್ವೀಟ್‌(Tweet) ಮಾಡಿರುವ ಬಿಜೆಪಿ, ಜಮೀರ್ ವಿರುದ್ಧ ಭ್ರಷ್ಟಾಚಾರದ(Corruption) ತನಿಖೆ ಮಾಡಿದರೆ ಸಿದ್ದರಾಮಯ್ಯ ಸಿಡುಕುವುದೇಕೆ? ಜಾರಿ ನಿರ್ದೇಶನಾಲಯದ(ED) ವರದಿ ಆಧರಿಸಿ ಎಸಿಬಿ(ACB) ದಾಳಿ ನಡೆದಿದೆಯೇ ಹೊರತು ಇದರಲ್ಲಿ ಬೇರೆ ಯಾವುದೇ ಹಿಡನ್ ಅಜೆಂಡಾ ಇಲ್ಲ. ಸತ್ಯಕ್ಕೆ ಅಂಜುವುದೇಕೆ? ಸಿದ್ದರಾಮೋತ್ಸವದ ಗುಂಗಿನಲ್ಲಿರುವ ಸಿದ್ದರಾಮಯ್ಯ ಅವರೇ, ನಿಮ್ಮ ಅತ್ಯಾಪ್ತ ಶಾಸಕ ಜಮೀರ್ ಅಹ್ಮದ್ ಆಸ್ತಿ ಎರಡು ಸಾವಿರ ಪಟ್ಟು ಹೆಚ್ಚಾಗಿದೆ. ಸಿದ್ದರಾಮೋತ್ಸವ ಸಮಿತಿಯಲ್ಲಿ ಸ್ಥಾನ ಪಡೆದಿರುವ ಜಮೀರ್ ಎಷ್ಟು ಹೂಡಿಕೆ ಮಾಡಿದ್ದಾರೆ? ಎಂದು ಪ್ರಶ್ನಿಸಿದೆ.

ಸಿದ್ದರಾಮಯ್ಯ ಮತ್ತು ಡಿಕೆಶಿ(DKS) ನಡುವಿನ ತೋರಿಕೆಯ ಒಗ್ಗಟ್ಟು ಈಗ ಬಯಲಾಗುತ್ತಿದೆ. ಈಗ ಡಿಕೆಶಿ ವಿರುದ್ಧವಾಗಿ ಸಿದ್ದರಾಮೋತ್ಸವ ಆಯೋಜನೆಯಾಗುತ್ತಿದೆ, ಸಿದ್ದರಾಮಯ್ಯ ವಿರುದ್ಧವಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಯೋಜನೆಯಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲೀಗ ಯುದ್ಧದ ಉತ್ಸವ ಮತ್ತು ಉತ್ಸಾಹ ಎರಡೂ ಇದೆ. ಸಿದ್ದರಾಮಯ್ಯ ಆಪ್ತರ ಪಟ್ಟಿಯಲ್ಲಿ ಡಿಕೆಶಿ ಇಲ್ಲವಂತೆ. ಸಿದ್ದರಾಮೋತ್ಸವ ಆಯೋಜನೆಯ ಬಗ್ಗೆ ಡಿಕೆಶಿಗೇನೂ ಗೊತ್ತಿಲ್ಲವಂತೆ. ಯಾಕೋ ಇವರಿಬ್ಬರ ಸ್ವರ ಸೇರುತ್ತಿಲ್ಲ,

ಅಪಸ್ವರದ ದನಿ ಊರಿಡೀ ಮಾರ್ದನಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಅಪಸ್ವರಕ್ಕೆ ಕೊರಸ್ ಸೇರಿಕೊಳ್ಳುವುದು ಸ್ಪಷ್ಟ ಎಂದು ಲೇವಡಿ ಮಾಡಿದೆ.

Exit mobile version