ಸುಶಾಂತ್‌ ಸಿಂಗ್‌ ಪ್ರಕರಣ ಸಿಬಿಐ ಹೆಗಲಿಗೆ

ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿರುವ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣ ಇದೀಗ ಮಹತ್ವ ತಿರುವು ಪಡೆದುಕೊಂಡಿದ್ದು, ಸುಪ್ರೀಂ ಕೋರ್ಟ್‌ ಬುಧವಾರ (ಆ.19) ಮಹತ್ವದ ತೀರ್ಪು ನೀಡಿದ್ದು, ಈ ಪ್ರಕರಣವನ್ನು ಸಿಬಿಐ ಅಧಿಕಾರಿಗಳು ತನಿಖೆ ಮಾಡಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ಈವರೆಗೂ ಕಲೆ ಹಾಕಲಾಗಿರುವ ಎಲ್ಲ ಸಾಕ್ಷ್ಯಾಧಾರಗಳನ್ನು ಮುಂಬೈ ಪೊಲೀಸರು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಎಂದು ಕೋರ್ಟ್‌ ಆದೇಶಿಸಿದೆ.

ಈ ಹಿಂದೆ ನಟನ ಸಾವಿನ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವ ಕುರಿತು ತಕರಾರು ಎತ್ತಿದ್ದ ಸುಶಾಂತ್‌ ಪ್ರೇಯಸಿ ರಿಯಾ ಚಕ್ರವರ್ತಿ, ಪಾಟ್ನಾದಲ್ಲಿ ದಾಖಲಾಗಿರುವ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಬೇಕು ಮನವಿ ಮಾಡಿಕೊಂಡಿದ್ದರು. ಇದೀಗ ರಿಯಾ ಮನವಿಯನ್ನು ಕೋರ್ಟ್‌ ತಳ್ಳಿ ಹಾಕಿದೆ.

ಸುಪ್ರೀಂ ತೀರ್ಪಿನ ಕುರಿತು ಸಂತಸ ವ್ಯಕ್ತ ಪಡಿಸಿರುವ ಸುಶಾಂತ್‌ ಕುಟುಂಬಸ್ಥರು ‘ಇದು ಸುಶಾಂತ್‌ ಸಿಂಗ್‌ ರಜಪೂತ್‌ ಕುಟುಂಬದವರಿಗೆ ಸಿಕ್ಕ ಜಯ. ನಮ್ಮ ವಾದವನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ. ಪಾಟ್ನಾದಲ್ಲಿ ದಾಖಲಾಗಿರುವ ಪ್ರಕರಣವೇ ಸರಿ ಎಂಬುದನ್ನು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ’ ಎಂದು ಸುಶಾಂತ್‌ ತಂದೆ ಕೆ.ಕೆ. ಸಿಂಗ್‌ ಪರ ವಕೀಲರಾದ ವಿಕಾಸ್‌ ಸಿಂಗ್‌ ಹೇಳಿಕೆ ನೀಡಿದ್ದಾರೆ.

ಜೂ.14ರಂದು ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್‌ ಶವ ಪತ್ತೆ ಆಯಿತು. ಕೆಲವೇ ದಿನಗಳ ಬಳಿಕ ಸುಶಾಂತ್‌ ತಂದೆ ಕೆ.ಕೆ. ಸಿಂಗ್‌ ಅವರು ಪಾಟ್ನಾದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅನೇಕರು ಒತ್ತಾಯಿಸಿದ್ದರು. ಸುಪ್ರೀಂ ಕೋರ್ಟ್‌ನ ತೀರ್ಪು ಬಂದ ಕೂಡಲೇ ಟ್ವೀಟ್‌ ಮಾಡಿರುವ ಸುಶಾಂತ್‌ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ, ‘ಸತ್ಯವೇ ಗೆಲ್ಲಲಿದೆ. ಸುಶಾಂತ್‌ ನ್ಯಾಯಕ್ಕೆ ಮೊದಲ ಹೆಜ್ಜೆ’ ಎಂದು ಬರೆದುಕೊಂಡಿದ್ದಾರೆ.

Exit mobile version