ಹುಬ್ಬಳ್ಳಿ, ಡಿ. 25: ಲಾಕ್ಡೌನ್ ನಂತರ ಜನರು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದಲ್ಲಾ ಒಂದು ಸರಕು ಸಾಮಾನುಗಳ ಬೆಲೆಗಳಲ್ಲಿನ ದರ ಏರಿಕೆಯಾಗುತ್ತಿದೆ. ಅಲ್ಲದೇ ಪೆಟ್ರೋಲ್, ಡೀಸಲ್, ಅಡುಗೆ ಎಣ್ಣೆ ಬೆಲೆಗಳು ಗಗನಕ್ಕೆ ಏರಿವೆ. ಇದರಿಂದ ಸಾರ್ವಜನಿಕರುಪರದಾಡುವ ಸ್ಥಿತಿ ಎದುರಾಗಿದೆ. ಈಗಾಗಲೇ ತರಕಾರಿ ದರಗಳ ಏರಿಕೆಯ ಬಿಸಿಯನ್ನು ಅನುಭಸಿದ್ದ ಗ್ರಾಹಕರು ಈಗ ಸ್ವಲ್ಪ ನಿರಾಳವಾಗಿದ್ದಾರೆ. ಏಕೆಂದರೆ ರೈತರಿಗೆ ಉತ್ತಮ ಫಸಲು ಲಭಿಸಿದ್ದರಿಂದ ಮಾರುಕಟ್ಟೆಯಲ್ಲಿ ತರಕರಿ ಬೆಲೆ ಕಡಿಮೆಯಾಗಿದೆ.
ಜಿಲ್ಲೆಯಲ್ಲಿ 93 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 20 ಸಾವಿರಕ್ಕೂ ಅಧಿಕ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದು, ಅದರಲ್ಲಿ ತರಕಾರಿ ಬೆಳೆಯುವ ರೈತರ ಸಂಖ್ಯೆ ಹೆಚ್ಚು. ಮತ್ತು ಭೂತಾನ್ನಿಂದ ಆಲೂಗಡ್ಡೆ ಎಪಿಎಂಸಿ ಮಾರುಕಟ್ಟೆಗೆ ಆಮದಾಗುತ್ತಿದೆ. ಈ ಹಿಂದೆ ಪ್ರತಿ ಕೆ.ಜಿಗೆ 40 ರಿಂದ 50 ರೂ. ಇದ್ದ ಆಲೂಗಡ್ಡೆ ಬೆಲೆ ಈಗ 20 ರೂ. ಗೆ ಇಳಿದಿದೆ. ಇದಕ್ಕೆ ಕಾರಣ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆಲೂಗಡ್ಡೆ ಬರುತ್ತಿರುವುದು ಎಂದು ಎಪಿಎಂಸಿ ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಅಧ್ಯಕ್ಷ ಮಹಮ್ಮದ್ ಸಲೀಂ ಮಾಹಿತಿ ನೀಡಿದ್ದಾರೆ.
ಅಲ್ಲದೇ ಇದರ ಜತೆಗೆ ಈರುಳ್ಳಿ ಬೆಲೆಯೂ ಸ್ವಲ್ಪ ಮಟ್ಟಿಗೆ ಇಳಿದಿದ್ದು, ಎಪಿಎಂಸಿ ಮಾರುಕಟ್ಟೆಗೆ ಸ್ಥಳೀಯ ರೈತರಿಂದ ಈರುಳ್ಳಿ ಹೆಚ್ಚು ಬರುತ್ತಿರುವುದರಿಂದ ಬೆಲೆ ಕಡಿಮೆಯಾಗಿದೆ ಎಂದು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಬಿ.ಎಸ್.ಮರಿಕಟ್ಟಿ ತಿಳಿಸಿದ್ದಾರೆ