ತೌಖ್ತೆ ಪರಿಣಾಮ ಮುಂಬೈನಲ್ಲಿ ಭಾರೀ ಮಳೆ

ಮುಂಬೈ, ಮೇ. 17: ತೌಖ್ತೆ ಚಂಡಮಾರುತವು ಗುಜರಾತ್‌ನತ್ತ ಸಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮುಂಬೈ ಸೇರಿದಂತೆ ನೆರೆ ಪ್ರದೇಶಗಳಲ್ಲಿ ಸೋಮವಾರ ಭಾರಿ ಗಾಳಿ, ಮಳೆಯಾಗಿದೆ.

‘ಮುಂಬೈನಲ್ಲಿ ಪ್ರಬಲ ಗಾಳಿ ಬೀಸುತ್ತಿರುವುದರಿಂದ ಬಾಂದ್ರಾ–ವರ್ಲಿ ಸೇತುವೆಯಲ್ಲಿ ವಾಹನ ಸಂಚಾರವನ್ನು ಮುಚ್ಚಲಾಗಿದ್ದು, ಜನರಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಮನವಿ ಮಾಡಲಾಗಿದೆ’ ಎಂದು ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಸಾರ್ವಜನಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

`ಹಿಂದ್ಮಾತಾ ಜಂಕ್ಷನ್, ಅಂಧೇರಿ ಮತ್ತು ಮಲಾಡ್ ಸುರಂಗಮಾರ್ಗ ಸೇರಿದಂತೆ ಆರು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ತುಂಬಿದೆ’ ಎಂದು ಮುಂಬೈ ‍ಪೊಲೀಸರು ಟ್ವೀಟ್ ಮಾಡಿದ್ದರು.

Exit mobile version