‘ನಿಮ್ಮನ್ನು ಸಾಯಿಸುತ್ತೀವಿ’ : ಕಾಶ್ಮೀರಿ ಪಂಡಿತರಿಗೆ ಭಯೋತ್ಪಾದಕ ಗುಂಪಿನಿಂದ ಬೆದರಿಕೆ!

Jammu

ಜಮ್ಮು ಮತ್ತು ಕಾಶ್ಮೀರದ(Jammu & Kashmir) ಪುಲ್ವಾಮಾ(Pulwama) ಜಿಲ್ಲೆಯ ಹವಾಲ್ ಟ್ರಾನ್ಸಿಟ್ ವಸತಿಗೃಹದಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರಿಗೆ ಲಷ್ಕರ್-ಎ-ಇಸ್ಲಾಂ ಎಂಬ ಭಯೋತ್ಪಾದಕ ಸಂಘಟನೆ ಸಾವಿನ ಬೆದರಿಕೆ ಹಾಕಿದೆ.

ವಲಸಿಗ ವಸಾಹತು ಅಧ್ಯಕ್ಷರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಗುಂಪು ಎಲ್ಲಾ ‘ವಲಸಿಗರು ಮತ್ತು ಆರ್‌ಎಸ್‌ಎಸ್ ಏಜೆಂಟರಿಗೆ’ ಈ ಕೂಡಲೇ ಹೊರಡಿ ಅಥವಾ ಸಾವನ್ನು ಎದುರಿಸಿ ಎಂದು ಎಚ್ಚರಿಕೆ ಕೊಟ್ಟಿದೆ. ಇದಲ್ಲದೆ, ಭಯೋತ್ಪಾದಕ ಗುಂಪು “ಕಾಶ್ಮೀರಿ ಮುಸ್ಲಿಮರನ್ನು ಕೊಲ್ಲಲು ಕಾಶ್ಮೀರದಲ್ಲಿ ಮತ್ತೊಂದು ಇಸ್ರೇಲ್ ಬಯಸುವ ಕಾಶ್ಮೀರಿ ಪಂಡಿತರಿಗೆ ಜಾಗವಿಲ್ಲ” ಎಂದು ಒತ್ತಿ ಹೇಳಿದೆ. ನಿಮ್ಮ ಭದ್ರತೆಯನ್ನು ದ್ವಿಗುಣ/ಮೂರರಷ್ಟು ಹೆಚ್ಚಿಸಿಕೊಂಡರು, ನಿಮಗೆ ಸಾವಿನಿಂದ ಬಚಾವ್ ಆಗಲು ಸಾಧ್ಯವೇ ಇಲ್ಲ.

ನಮ್ಮ ಉದ್ದೇಶಿತ ಹತ್ಯೆಗೆ ಸಿದ್ಧರಾಗಿರಿ, ನೀವು ಸಾಯುವುದು ಖಚಿತ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ್ ಸರ್ಕಾರಿ ನೌಕರ ರಾಹುಲ್ ಭಟ್ ಭಯೋತ್ಪಾದಕರ ಗುಂಡಿಗೆ ಬಲಿಯಾದ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸುತ್ತಿದೆ. ಗುರುವಾರ ಮಧ್ಯಾಹ್ನ ಕೇಂದ್ರ ಕಾಶ್ಮೀರದ ಚದೂರದಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಅವರ ಮೇಲೆ ದಾಳಿ ನಡೆಯಿತು.

ಭಯೋತ್ಪಾದಕ ಗುಂಪು ‘ಕಾಶ್ಮೀರ ಟೈಗರ್ಸ್’ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ದಾಳಿಯ ನಂತರ, ಕಾಶ್ಮೀರಿ ಪಂಡಿತ್ ಸಮುದಾಯವು ಕೇಂದ್ರಾಡಳಿತ ಪ್ರದೇಶದಾದ್ಯಂತ ಬೀದಿಗಿಳಿದು ರಾಹುಲ್ ಭಟ್ ಸಾವಿಗಾದ ಕಾರಣ ಕುರಿತು ಪ್ರತಿಭಟನೆಗಳನ್ನು ನಡೆಸಿತು. ಶನಿವಾರ, ಕಾಶ್ಮೀರಿ ಪಂಡಿತ್ ಸಮುದಾಯದ ಸರ್ಕಾರಿ ನೌಕರರು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಪತ್ರ ರವಾನಿಸಿದ್ದು, ಪತ್ರದಲ್ಲಿ ಕಾಶ್ಮೀರ ಕಣಿವೆಯಿಂದ ಸ್ಥಳಾಂತರಿಸುವಂತೆ ಕೋರಿ ಮನವಿ ಮಾಡಿದರು.

ಸದ್ಯದ ಪರಿಸ್ಥಿತಿ ಕಾಶ್ಮೀರ ನಮಗೆ ಸುರಕ್ಷಿತವಲ್ಲ, ನಮ್ಮನ್ನು ಕಾಶ್ಮೀರದಿಂದ ಶೀಘ್ರವೇ ಬೇರೆಡೆ ಸ್ಥಳಾಂತರಿಸಿ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದರು.

Exit mobile version