ಚುನಾವಣೆ ಬಾಂಡ್ ವಿತರಣೆಗೆ ತಡೆ ಸಾಧ್ಯವಿಲ್ಲ ಎಂದ ಸುಪ್ರೀಂಅಕೋರ್ಟ್

ನವದೆಹಲಿ, ಮಾ. 26: ಚುನಾವಣೆ ಬಾಂಡ್​ಗಳ (ಎಲೆಕ್ಟೋರಲ್ ಬಾಂಡ್) ವಿತರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರ ಪರಿಣಾಮವಾಗಿ, ಈಗ ವಿಧಾನಸಭೆ ಚುನಾವಣೆ ಘೋಷಣೆ ಆಗಿರುವ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮಬಂಗಾಳ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಹೊಸದಾಗಿ ಚುನಾವಣೆ ಬಾಂಡ್​ಗಳನ್ನು ಬಿಡುಗಡೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹಾಕಿದ್ದ ಅರ್ಜಿಯ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯಮ್ ಅವರನ್ನು ಒಳಗೊಂಡ ಪೀಠವು ವಿಚಾರಣೆ ನಡೆಸಿತ್ತು. 2018 ಮತ್ತು 2019ರಲ್ಲಿ ಯಾವುದೇ ಅಡೆತಡೆ ಇಲ್ಲದೆ ಬಾಂಡ್​ಗಳನ್ನು ಬಿಡುಗಡೆ ಮಾಡಿದಾಗ ಅಗತ್ಯ ಪ್ರಮಾಣದ ಸುರಕ್ಷತಾ ಕ್ರಮಗಳು ಇದ್ದವು. ಸದ್ಯಕ್ಕೆ ಚುನಾವಣೆ ಬಾಂಡ್​ಗಳಿಗೆ ತಡೆ ನೀಡುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಆದೇಶದಲ್ಲಿ ಹೇಳಿರುವುದಾಗಿ ಮಾಹಿತಿ ಇದೆ.

ಏನಿದು ಎಲೆಕ್ಟೋರಲ್ ಬಾಂಡ್?
ಎಲೆಕ್ಟೋರಲ್ ಬಾಂಡ್ ಎಂಬುದು ಫೈನಾನ್ಷಿಯಲ್ ಇನ್​ಸ್ಟ್ರುಮೆಂಟ್. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕೆ ಇದನ್ನು ಬಳಸಲಾಗುತ್ತಿದೆ. ಕೇವಲ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್​ಗಳು ಕೇಂದ್ರದ ಅನುಮತಿ ಮೇರೆ ವಿತರಿಸುತ್ತದೆ. ದೇಣಿಗೆ ನೀಡುವವರು ಚೆಕ್ ಮತ್ತು ಡಿಜಿಟಲ್ ಪಾವತಿ ಮಾಡಬಹುದು. ನಗದಿನ ಮೂಲಕ ಖರೀದಿಸುವುದು ಸಾಧ್ಯವಿಲ್ಲ. ಬಾಂಡ್ ವಿತರಣೆ ಆದ ನಿರ್ದಿಷ್ಟ ಅವಧಿಯೊಳಗಾಗಿ ನೋಂದಾಯಿತ ರಾಜಕೀಯ ಪಕ್ಷಗಳು ಆಯಾ ಬ್ಯಾಂಕ್ ಖಾತೆಯಲ್ಲಿ ಹಣ ಪಡೆದುಕೊಳ್ಳಬಹುದು.

ಎಲೆಕ್ಟೋರಲ್ ಬಾಂಡ್​ಗಳ ಮೂಲಕ ರಾಜಕೀಯ ಪಕ್ಷಗಳು ಪಡೆಯುವ ಈ ನಿಧಿಯನ್ನು ಭಯೋತ್ಪಾದನೆಯಂಥ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸದಂತೆ ತಡೆಯುವುದಕ್ಕೆ ನಿಯಂತ್ರಣ ಇದೆಯೇ ಎಂದು ಮಾರ್ಚ್ 24ನೇ ತಾರೀಕಿನಂದು ಸುಪ್ರೀಂ ಕೋರ್ಟ್ ಪ್ರಶ್ನೆ ಎತ್ತಿತ್ತು. ಮುಖ್ಯನಾಯಮೂರ್ತಿ ಬೋಬ್ಡೆ ಅವರನ್ನು ಒಳಗೊಂಡ ಪೀಠವು ಅಟಾರ್ನಿ ಜನರಲ್ ಕೆ.ಕೆ. ವೇಣಿಗೋಪಾಲ್ ಅವರಿಗೆ ಸೂಚಿಸಿ, ಸರ್ಕಾರವು ಈ ಸಮಸ್ಯೆ ಕಡೆಗೆ ಗಮನ ಹರಿಸಬೇಕು. ಚುನಾವಣೆ ಬಾಂಡ್​ಗಳ ಮೂಲಕ ಪಡೆದ ಹಣವು ಭಯೋತ್ಪಾದನೆಯಂಥ ಕಾನೂನುಬಾಹಿರ ಉದ್ದೇಶಕ್ಕೆ ದುರ್ಬಳಕೆ ಆಗಬಾರದು ಎಂದಿತ್ತು.

Exit mobile version