ಭಾರತ-ಪಾಕ್ ಕದನ ವಿರಾಮ ನಡೆ ಸ್ವಾಗತಿಸಿದ ವಿಶ್ವಸಂಸ್ಥೆ

ವಿಶ್ವಸಂಸ್ಥೆ, ಫೆ. 26: ಜಮ್ಮು–ಕಾಶ್ಮೀರದಲ್ಲಿ ಪ್ರಸ್ತುತ ಜಾರಿ ಇರುವ ಕಾರ್ಯತಂತ್ರಗಳ ಮೂಲಕ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕದನ ವಿರಾಮದ ನಿಯಮಗಳನ್ನು ಪಾಲಿಸಲು ಭಾರತ ಮತ್ತು ಪಾಕಿಸ್ತಾನ ಕೈಗೊಂಡಿರುವ ಜಂಟಿ ಕ್ರಮಗಳಿಂದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ತುಂಬಾ ಉತ್ತೇಜಿತರಾಗಿದ್ದಾರೆ’ ಎಂದು ಗುಟೆರಸ್ ಅವರ ವಕ್ತಾರ ಸ್ಟೀಫನೆ ಡುಜರ‍್ರಿಕ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಎರಡು ರಾಷ್ಟ್ರಗಳ ನಡುವೆ ಮುಂದೆ ನಡೆಯುವ ಮಾತುಕತೆಗಳಿಗೆ ಅವಕಾಶವನ್ನು ಕಲ್ಪಿಸಲಿದ್ದು, ಚರ್ಚೆಗೆ ದಾರಿಯೂ ಸುಗಮವಾಗಲಿದೆ ಎಂದು ಗುಟೆರಸ್‌ ಅಭಿಪ್ರಾಯಪಟ್ಟಿರುವುದಾಗಿ’ ಡುಜರ‍್ರಿಕ್ ತಿಳಿಸಿದ್ದಾರೆ.

ಈ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರು ಎರಡು ರಾಷ್ಟ್ರಗಳ ನಾಯಕರೊಂದಿಗೆ ಚರ್ಚೆ ನಡೆಸಲಿ ದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡುಜರ‍್ರಿಕ್, ‘ಸದ್ಯಕ್ಕೆ ಅಂತ ಯೋಚನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಒಳ್ಳೆಯ ಕೆಲಸಗಳಿಗೆ ಸ್ಪಂದಿಸಲು ಪ್ರಧಾನ ಕಾರ್ಯದರ್ಶಿಯವರು ಸದಾ ಸಿದ್ಧರಿರುತ್ತಾರೆ’ ಎಂದು ಹೇಳಿದರು.

ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದ ಅಧ್ಯಕ್ಷ ವೋಲ್ಕನ್ ಬೊಜ್ಕಿಕರ್ ಅವರು, ‘ಗಡಿ ಭಾಗದಲ್ಲಿ ಕದನವಿರಾಮದ ನಿಯಮಗಳನ್ನು ಪಾಲಿಸಲು ಒಪ್ಪಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ ನಡೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಗಡಿಭಾಗದಲ್ಲಿನ ಉದ್ವಿಗ್ನತೆ ಕಡಿಮೆ ಮಾಡುವ ಮಹತ್ವದ ಕ್ರಮದಲ್ಲಿ ಭಾರತ ಮತ್ತು ಪಾಕಿಸ್ತಾನದ ಸೇನೆಯ ಅಧಿಕಾರಿಗಳು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕದನ ವಿರಾಮಕ್ಕೆ ಸಂಬಂಧಿಸಿದ ಎಲ್ಲಾ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒಪ್ಪಿಕೊಂಡಿದ್ದಾರೆ.

Exit mobile version