ಕಾಲೇಜು ಕಟ್ಟಡದ ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಾಯ: ಮಹಾರಾಜ ಕಾಲೇಜಿನಲ್ಲಿ ಘಟನೆ

ಮೈಸೂರು, ಫೆ. 10: ನಗರದ ಮಹಾರಾಜ ಕಾಲೇಜಿನಲ್ಲಿ ಚಾವಣಿ ಕುಸಿದು ಮೂವರು ಗಾಯಗೊಂಡಿದ್ದಾರೆ. ನ್ಯಾಯ ವಿಜ್ಞಾನ ಮತ್ತು ಅಪರಾಧ ಶಾಸ್ತ್ರ ವಿಭಾಗದಲ್ಲಿ ಪಾಠ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ವಿಶಾಲ್‌, ಸಲೀಂ ಪಾಶಾ, ಯಶ್ವಂತ್‌ ಎಂದು ಗುರುತಿಸಲಾಗಿದೆ.

ವಿಶಾಲ್‌ ತಲೆಯ ಭಾಗಕ್ಕೆ ಏಟಾಗಿದ್ದು ಮಿಕ್ಕ ಇಬ್ಬರು ವಿದ್ಯಾರ್ಥಿಗಳಿಗೆ ಕೈ, ಕಾಲಿನ ಮೇಲೆ ತರಚಿದ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಪಾಠ ನಡೆಯುತ್ತಿದ್ದ ವೇಳೆ ತರಗತಿಯಲ್ಲಿ 24 ಮಂದಿ ವಿದ್ಯಾರ್ಥಿಗಳಿದ್ದರು. ಚಾವಣಿಯ ಒಂದು ಭಾಗದ ಸುಮಾರು ಮೂರು ಅಡಿಯ ಗಾರೆಯು ಕುಸಿದು ವಿದ್ಯಾರ್ಥಿಗಳ ಮೇಲೆ ಬಿದ್ದಿದೆ. ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಕಾಮಾಕ್ಷಿ ಆಸ್ಪತ್ರೆಗೆ ದಾಖಲಿಸಲಾಯಿತು.

ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಅನಿಟಾ ವಿಮಲಾ ಬ್ರ್ಯಾಗ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌ ಈ ವೇಳೆ ಮಾತನಾಡಿದ ಅವರು, ಗಾಯಗೊಂಡ ವಿದ್ಯಾರ್ಥಿಗಳಿಗೆ ನಮ್ಮ ಹೆಲ್ತ್ ಸೆಂಟರ್ ನಲ್ಲೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಆದರೆ ವೈದ್ಯರು ಇಲ್ಲದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಬ್ಬ ವಿದ್ಯಾರ್ಥಿಗೆ ತಲೆಗೆ ಗಂಭೀರ ಗಾಯ ಆಗಿದೆ ಎಂದು ಮಾಹಿತಿ ನೀಡಿದರು.

Exit mobile version