ಟ್ರಕ್ ಹಾಗೂ ಬಸ್ ನಡುವೆ ಡಿಕ್ಕಿ: 18 ಕೂಲಿ ಕಾರ್ಮಿಕರ ಸಾವು; ಉತ್ತರಪ್ರದೇಶದ ಬಾರಬಂಕಿಯಲ್ಲಿ ಘಟನೆ

ಲಕ್ನೋ, ಜು. 28: ಟ್ರಕ್ ಹಾಗೂ ಡಬಲ್ ಡೆಕ್ಕರ್ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ 18 ಮಂದಿ ಮೃತಪಟ್ಟಿರುವ ಘಟನೆ ರಾಮ್‍ಸ್ನೇಹಿಘಾಟ್ ಪೊಲೀಸ್ ಠಾಣೆ ಬಳಿ ಲಖನೌ-ಅಯೋಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬರಾಬಂಕಿಯಲ್ಲಿ ಸಂಭವಿಸಿದ ದೊಡ್ಡ ರಸ್ತೆ ಇದಾಗಿದ್ದು, ಈ ದುರ್ಘಟನೆಯಲ್ಲಿ ಬಸ್ಸಿನಲ್ಲಿದ್ದ 19 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಲಕ್ನೋ ಟ್ರಾಮಾ ಸೆಂಟರ್ ಗೆ ದಾಖಲಿಸಲಾಗಿದೆ.

ಮಂಗಳವಾರ ತಡರಾತ್ರಿ 1:30ರ ವೇಳೆಯಲ್ಲಿ ಈ ಘಟನೆ ನಡೆದಿದೆ. ಅಯೋಧ್ಯೆ ಗಡಿಯ ಕಲ್ಯಾಣಿ ನದಿ ಸೇತುವೆಯಲ್ಲಿ 1 ಗಂಟೆಯ ವೇಳೆಗೆ ಬಸ್ಸಿನ ಆ್ಯಕ್ಸಿಲ್ ತುಂಡಾಗಿ ಬಸ್ಸು ಕೆಟ್ಟು ನಿಂತಿತ್ತು. ಚಾಲಕ ಹಾಗೂ ಆಪರೇಟರ್, ಬಸ್ಸನ್ನು ಬದಿಯಲ್ಲಿ ನಿಲ್ಲಿಸಿ ದುರಸ್ತಿ ಮಾಡುತ್ತಿದ್ದರು. ಈ ವೇಳೆ ಲಕ್ನೋ ಕಡೆಯಿಂದ ವೇಗವಾಗಿ ಬಂದ ಟ್ರಕ್ಕೊಂದು ಬಸ್ಸಿಗೆ ಢಿಕ್ಕಿ ಹೊಡೆದಿದೆ.

ಪರಿಣಾನ ಬಸ್ಸಿನಲ್ಲಿ ನಿದ್ರಿಸುತ್ತಿದ್ದ 18 ಮಂದಿ ಕೂಲಿಕಾರ್ಮಿಕರು ಮೃತಪಟ್ಟಿದ್ದು, ಇತರ 19 ಮಂದಿ ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಇತರೆ ಸಿಬ್ಬಂದಿ ಬಸ್ಸಿನಡಿ ಸಿಕ್ಕಿಹಾಕಿಕೊಂಡ ದೇಹಗಳನ್ನು ಹೊರಗೆ ತೆಗೆದಿದ್ದಾರೆ. ಹೆಚ್ಚಿನ ಪ್ರಯಾಣಿಕರು ಸೀತಾಮರ್ಹಿ ಮತ್ತು ಸಹರ್ಸಾ ಸೇರಿದಂತೆ ಬಿಹಾರದ ವಿವಿಧ ಜಿಲ್ಲೆಗಳಿಂದ ಬಂದವರು ಎಂದು ಲಕ್ನೋ ವಲಯ ಎಡಿಜಿಪಿ ನಾರಾಯಣ ಸಬತ್ ಹೇಳಿದ್ದಾರೆ.

ಈ ಭೀಕರ ಅಪಘಾತದ ಬಗ್ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಂಪನಿ ಮಿಡಿದಿದ್ದಾರೆ. ಅಲ್ಲದೇ, ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಿಲೀಫ್ ಫಂಡ್ ನಿಂದ ಎರಡು ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ನೀಡುವಂತೆ ಪ್ರಧಾನಿ ಮೋದಿ ಘೋಷಿಸಿದ್ದಾರೆ.

Exit mobile version