ಟೋಕಿಯೊ, ಡಿ. 15: ಇಲ್ಲೊಬ್ಬ ಟ್ವಿಟರ್ ಕಿಲ್ಲರ್. ಟ್ವಿಟರ್ನಲ್ಲಿಯೇ ಜನರನ್ನು ಪರಿಚಯ ಮಾಡಿಕೊಂಡು ತನ್ನೆದುರು ಕರೆಸಿಕೊಂಡು ಹತ್ಯೆ ಮಾಡುತ್ತಿದ್ದ! ನಂಬಲು ಅಸಾಧ್ಯ ಎನಿಸುವ ಕೃತ್ಯ ಎಸಗುತ್ತಿದ್ದ ಈ ಯುವಕನ ಹೆಸರು ಟಕಹಿರೋ ಶಿರೇಷಿ. 27 ವರ್ಷದ ಈ ಯುವಕ ಟ್ವಿಟರ್ ಬಳಸಿ ಒಟ್ಟೂ ಒಂಬತ್ತು ಮಂದಿಯನ್ನು ಕೊಲೆ ಮಾಡಿದ್ದಾನೆ! ಅದಕ್ಕಾಗಿಯೇ ಇವರಿಗೆ ಟ್ವಿಟರ್ ಕಿಲ್ಲರ್ ಎಂಬ ಹೆಸರು.
ಅಂದಹಾಗೆ ಈಗ ಜಪಾನ್ನ ಟೋಕಿಯೊ ನಿವಾಸಿ. ಅತ್ಯಂತ ನಿಗೂಢವಾಗಿಯೇ ಉಳಿದಿದ್ದ ಒಂಬತ್ತು ಮಂದಿಯ ಕೊಲೆ ಪ್ರಕರಣವನ್ನು ಭೇದಿಸಿದ್ದ ಜಪಾನ್ ಪೊಲೀಸರಿಗೆ ಕೊನೆಗೂ ಈ ಯುವಕ ಸಿಕ್ಕಿಬಿದ್ದಿದ್ದಾನೆ. ಅತ್ಯಂತ ವಿಚಿತ್ರ ರೀತಿಯಲ್ಲಿ ಈತ 9 ಮಂದಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈತನಿಗೆ ಜಪಾನ್ ಕೋರ್ಟ್ ಇದೀಗ ಗಲ್ಲುಶಿಕ್ಷೆ ವಿಧಿಸಿದೆ. ಎಂಟು ಮಂದಿ ಯುವತಿಯರು ಹಾಗೂ ಒಬ್ಬ ಯುವಕ ಸೇರಿದಂತೆ ಒಂಬತ್ತು ಮಂದಿಯನ್ನು ಕೊಲೆ ಮಾಡಿರುವ ಹೇಯ ಕೃತ್ಯ ಎಸಗಿದವನಿಗೆ ಇದೇ ಸರಿಯಾದ ಶಿಕ್ಷೆ ಎಂದು ಕೋರ್ಟ್ ಹೇಳಿದೆ.2009ರಿಂದ 2011ರವರೆಗೆ ಸೂಪರ್ ಮಾರ್ಕೆಟ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಟಕಹಿರೋ ಶಿರೇಷಿ ಕೆಲಸವನ್ನು ಬಿಟ್ಟಿದ್ದ. ನಂತರ ಕೆಲಸಕ್ಕಾಗಿ ತುಂಬಾ ಪ್ರಯತ್ನಪಟ್ಟಿದ್ದರೂ ಯಾವ ಕೆಲಸವೂ ಸಿಕ್ಕಿರಲಿಲ್ಲ, ಇದರಿಂದ ಮಾನಸಿಕವಾಗಿ ಕುಗ್ಗಿದ್ದ, ಜತೆಗೆ ವಿಚಿತ್ರವಾಗಿ ವರ್ತಿಸತೊಡಗಿದ್ದ.ಇದೇ ಅವನಲ್ಲಿ ವಿಕೃತ ಮನೋಭಾವಕ್ಕೆ ಕಾರಣವಾಗಿತ್ತು. ಸದಾ ಟ್ವಿಟರ್ನಲ್ಲಿ ನಿತರನಾಗುತ್ತಿದ್ದ ಈತನಿಗೆ, ಕೆಲವರು ಪರಿಚಯವಾಗಿದ್ದರು. ಬದುಕಿನಲ್ಲಿ ತನ್ನಂತೆಯೇ ಹತಾಶರಾಗಿದ್ದು, ಟ್ವಿಟರ್ನಲ್ಲಿ ಹೇಳಿಕೆಗಳನ್ನು ಪೋಸ್ಟ್ ಮಾಡುವವರು ಇವನಿಗೆ ಟಾರ್ಗೆಟ್ ಆದರು.
ಇವರು ಕೂಡ ತನ್ನಂತೆಯೇ ಮಾನಸಿಕವಾಗಿ ಕುಗ್ಗಿದ್ದರಿಂದ, ನಿಧಾನವಾಗಿ ಅವರಿಗೆಲ್ಲಾ ಮೆಸೇಜ್ ಮಾಡಲು ಶುರು ಮಾಡಿದ್ದ. ನಿಮಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನಿಸುತ್ತಿದೆಯೆ? ಈ ರೀತಿ ಬದುಕುವುದಕ್ಕಿಂತ ಆತ್ಮಹತ್ಯೆಯೇ ಮೇಲು ಎಂದೆಲ್ಲಾ ಅಂಥವರಿಗೆ ಹೇಳುತ್ತಿದ್ದ. ಈತನ ಮಾತು ಕೇಳಿದವರಿಗೆ ಇನ್ನೂ ಆತ್ಮಹತ್ಯೆ ಮನೋಭಾವ ಕಾಡತೊಡಗುತ್ತಿತ್ತು.
ಅವರ ಬ್ರೇನ್ವಾಷ್ ಮಾಡಿದ ನಂತರ ಅವರು ಹೌದು ತಮಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನಿಸುತ್ತಿದೆ ಎನ್ನುತ್ತಿದ್ದರು. ಆಗ ಅವರನ್ನು ತನ್ನ ಬಳಿಗೆ ಬರಲು ಹೇಳುತ್ತಿದ್ದ ಈ ಯುವಕ. ನಿಮಗೆ ಯಾವುದೇ ತೊಂದರೆ ಇಲ್ಲದಂತೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂದು ನಾನು ಹೇಳಿಕೊಡುವೆ ಎಂದು ಅವರನ್ನು ಕರೆಸಿಕೊಂಡು ನಂತರ ವಿಕೃತವಾಗಿ ಅವರನ್ನು ಕೊಲೆ ಮಾಡುತ್ತಿದ್ದ. ಹೀಗೆ ಎಂಟು ಮಂದಿ ಯುವತಿಯರು ಮತ್ತು ಒಬ್ಬ ಯುವಕ ಈತನಿಗೆ ಬಲಿಯಾದರು. 9 ಮಂದಿಯ ನಿಗೂಢ ಹತ್ಯೆಯನ್ನು ಭೇದಿಸಿದ ಪೊಲೀಸರು ನಂತರ ಖುದ್ದು ಟ್ವಿಟರ್ ಮೂಲಕ ತಾವೇ ಆತನನ್ನು ಪರಿಚಯ ಮಾಡಿಕೊಂಡು ಆತನಿಗಾಗಿ ಬಲೆ ಬೀಸಿ ಹಿಡಿದಿದ್ದಾರೆ. ತಾನು ಮಾಡಿರುವ ಕೃತ್ಯಗಳನ್ನು ಆತ ಒಪ್ಪಿಕೊಂಡಿದ್ದಾನೆ. ಜಪಾನ್ನಲ್ಲಿ ಅಪರಾಧ ಪ್ರಕರಣಗಳು ಅತ್ಯಂತ ಕಡಿಮೆ. ಆದರೆ ಈ ರೀತಿ ಒಂಬತ್ತು ಕೊಲೆಗಳು ಪೊಲೀಸರ ನಿದ್ದೆಗೆಡಿಸಿದ್ದವು ಎನ್ನಲಾಗಿದೆ. ಈತನಿಗೆ ಶಿಕ್ಷೆಯ ಪ್ರಮಾಣ ವಿಧಿಸುವುದನ್ನು ತಿಳಿಯುತ್ತಿದ್ದಂತೆಯೇ ಇಲ್ಲಿಯ ಕೋರ್ಟ್ನಲ್ಲಿ ಹಿಂದೆಂದೂ ಕಾಣದಷ್ಟು ರೀತಿಯಲ್ಲಿ ಜನರು ಕಿಕ್ಕಿರಿದು ತುಂಬಿದ್ದರು ಎಂದು ವರದಿಯಾಗಿದೆ.