Bengaluru : ರಾಜ್ಯ ಬಿಜೆಪಿ(BJP) ಅಧ್ಯಕ್ಷರಾಗಿ ವಿಜಯೇಂದ್ರ(Vijayandra) ಆಯ್ಕೆಯಾದ ನಂತರ ಸ್ವಪಕ್ಷದ ವಿರುದ್ದ ಬಹಿರಂಗವಾಗಿಯೇ ಅನೇಕ ಬಾರಿ ಅಸಮಾದಾನ ಹೊರಹಾಕಿ, ಪಕ್ಷ ತೊರೆಯಲು ಸಜ್ಜಾಗಿದ್ದ ಬಿಜೆಪಿಯ ಹಿರಿಯ ನಾಯಕ ವಿ.ಸೋಮಣ್ಣ ಅವರು ಪಂಚರಾಜ್ಯಗಳ(5 States) ಫಲಿತಾಂಶದ ನಂತರ ತಮ್ಮ ನಿಲುವು ಬದಲಿಸಿ ತಣ್ಣಗಾದರಾ ಎಂಬ ಪ್ರಶ್ನೆ ಅನುಮಾನ ಮೂಡುತ್ತಿದೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ(Assembly Election) ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ನಂತರ ಸೋಮಣ್ಣ(V.Sommana) ಅವರ ರಾಜಕೀಯ ಲೆಕ್ಕಾಚಾರವು ಬದಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಬಿಜೆಪಿ ತೊರೆದು, ಕಾಂಗ್ರೆಸ್ ಹೋಗಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ, ಗೆಲುವು ಅಷ್ಟು ಸುಲಭವಲ್ಲ. ಆದರೆ ಬಿಜೆಪಿಯಲ್ಲಿಯೇ ಇದ್ದು, ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದುಕೊಂಡು ಸ್ಪರ್ಧೆ ಮಾಡಿದರೆ ಗೆಲುವು ಸುಲಭ. ಹೀಗಾಗಿ ಸದ್ಯದ ಮಟ್ಟಿಗೆ ಬಿಜೆಪಿಯಲ್ಲಿರುವುದೇ ರಾಜಕೀಯವಾಗಿ ನನಗೆ ಉತ್ತಮ ಎಂಬ ನಿರ್ಧಾರಕ್ಕೆ ಸೋಮಣ್ಣ ಅವರು ಬಂದಿದ್ದಾರೆ ಎನ್ನಲಾಗಿದೆ.
ಇನ್ನು ಕಳೆದ ಕೆಲ ದಿನಗಳಿಂದ ಬಿಜೆಪಿ(BJP) ವಿರುದ್ದ ಕಿಡಿಕಾರುತ್ತಿದ್ದ ಸೋಮಣ್ಣ ಅವರು ಕಾಂಗ್ರೆಸ್(Congress) ಸೇರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಸೋಮಣ್ಣ ಅವರು ತುಮಕೂರಿನ(Tumkur) ಸಿದ್ದಗಂಗಾ ಮಠದಲ್ಲಿ ಬೃಹತ್ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡು, ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಈ ಕಾರ್ಯಕ್ರಮಕ್ಕೆ ಪ್ರಬಲ ಲಿಂಗಾಯತ ನಾಯಕ ಯಡಿಯೂರಪ್ಪನವರನ್ನು ದೂರವಿಟ್ಟುದ್ದು, ಕೂಡಾ ಅನುಮಾನಕ್ಕೆ ಕಾರಣವಾಗಿತ್ತು. ಆದರೆ ಅಂತಿಮವಾಗಿ ಸಿದ್ದಗಂಗಾ ಶ್ರೀಗಳು ಈ ಕಾರ್ಯಕ್ರಮವನ್ನು ರಾಜಕೀಯಗೊಳಿಸದಂತೆ ನೀಡಿದ ಸೂಚನೆಯಿಂದಾಗಿ ಸೋಮಣ್ಣ ಅವರು ತಣ್ಣಗಾದರು ಎಂಬ ಮಾತುಗಳು ಕೇಳಿ ಬರುತ್ತಿದೆ.
ಒಟ್ಟಾರೆಯಾಗಿ ಬಿಜೆಪಿ ವಿರುದ್ದ ಸಿಡಿಯಲು ಮುಂದಾಗಿದ್ದ ಸೋಮಣ್ಣ ಅವರು ತಣ್ಣಗಾಗಿದ್ದಾರೆ. ಆದರೆ ಹೊಸ ಅವಕಾಶ ಮತ್ತು ಸ್ಥಾನಮಾನಕ್ಕಾಗಿ ಹೊಂದಾಣಿಕೆಗೆ ಮುಂದಾಗಿದ್ದಾರೆ. ದೆಹಲಿಗೆ(Delhi) ತೆರಳಿ ಕೇಂದ್ರ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿರುವ ಸೋಮಣ್ಣ ಅವರಿಗೆ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಇನ್ನೊಂದೆಡೆ ರಾಜ್ಯ ಬಿಜೆಪಿಯಲ್ಲಿಯೂ ಸೋಮಣ್ಣ ಅವರಿಗೆ ಬೆಂಬಲವಾಗಿ ನಿಲ್ಲುವವರಿಲ್ಲ. ಹೀಗಾಗಿ ರಾಜಕೀಯವಾಗಿ ಅಳೆದು-ತೂಗಿ ಹೆಜ್ಜೆ ಇಡಲು ಸೋಮಣ್ಣ ಅವರು ಮುಂದಾಗಿದ್ದಾರೆ.