ದೆಹಲಿಯಲ್ಲಿ ವರುಣನ ಆರ್ಭಟ; ಯೆಲ್ಲೋ ಅಲರ್ಟ್

ನವದೆಹಲಿ, ಆ. 21: ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಬೆಳಿಗ್ಗೆ ಭಾರಿ ಮಳೆಯಾಗಿದ್ದು, ನಗರದ ಮಿಂಟೋ ಸೇತುವೆ, ಮೂಲ್‌ಚಂದ್ ಅಂಡರ್‌ಪಾಸ್ ಮತ್ತು ಐಟಿಒ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ನೀರು ನಿಂತಿದೆ.

ಹವಾಮಾನ ಇಲಾಖೆಯು ದೆಹಲಿಗೆ ‘ಯಲ್ಲೋ ಅಲರ್ಟ್‌’ ಘೋಷಿಸಿದ್ದು, ಮುಂದಿನ ಕೆಲ ದಿನಗಳ ವರೆಗೆ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಮುನ್ನೆಚ್ಚರಿಕೆ ನೀಡಿದೆ.

ದೆಹಲಿಯ ಹಲವು ಭಾಗ ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ನಿರ್ಣಾಯಕ ಅಂಡರ್‌ಪಾಸ್‌ಗಳಲ್ಲಿ ಸಂಚಾರ ನಿರ್ಬಂಧಿಸಿ, ಸಾಮಾಜಿಕ ಮಾಧ್ಯಮಗಳ ಮೂಲಕ ನಾಗರಿಕರಿಗೆ ಮಾಹಿತಿ ನೀಡಿದ್ದಾರೆ.

ಜಲಾವೃತವಾಗಿರುವ ಪ್ರದೇಶಗಳ ಸಮಸ್ಯೆ, ದೂರುಗಳನ್ನು ಆದ್ಯತೆಯ ಮೇಲೆ ಪರಿಹರಿಸಲು ಅಧಿಕಾರಿಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.

Exit mobile version