ಸಿಡಿ ಪ್ರಕರಣದ ಸಂತ್ರಸ್ತೆಗೆ ರಕ್ಷಣೆ ಸಿಕ್ಕಿದೆ: ಎಚ್‌.ಡಿ. ಕುಮಾರಸ್ವಾಮಿ

ಮೈಸೂರು, ಮಾ. 14: ಸಿಡಿ ಪ್ರಕರಣದ ಸಂತ್ರಸ್ತೆಗೆ ಯಾರಿಂದ ರಕ್ಷಣೆ ಸಿಗಬೇಕಾಗಿದೆಯೋ ಅವರಿಂದ ಸಿಕ್ಕಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮೈಸೂರಿನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಆ ಯುವತಿ ಟ್ರೇಸ್ ಆಗದೆ ಇದ್ದರೂ ಆಕೆಗೆ ಸಿಗಬೇಕಾದ ರಕ್ಷಣೆ ಕೆಲವರಿಂದ ಸಿಕ್ಕಿದೆ. ಸರ್ಕಾರದ ಒಳಗಿನವರೋ ಅಥವಾ ಸರ್ಕಾರದ ವಿರುದ್ಧ ಇರುವವರೋ ಯಾರೋ ಆ ಸಂತ್ರಸ್ತೆಗೆ ಈಗಾಗಲೇ ರಕ್ಷಣೆ ನೀಡಿರಬಹುದು. ಈ ಮನುಷ್ಯನ ವೇಗಕ್ಕೆ ಬ್ರೇಕ್ ಹಾಕಲು ಸರ್ಕಾರದ ಒಳಗೆ ಇದ್ದವರೆ ಆ ಯುವತಿಗೆ ರಕ್ಷಣೆ ಕೊಡುತ್ತಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಆ ಯುವತಿಗೆ ಕೆಲವರಿಂದ ರಕ್ಷಣೆಯಂತೂ ಇದೆ ಎಂದು ತಿಳಿಸಿದರು.

ಈ ಪ್ರಕರಣದಲ್ಲಿ ಡಿಕೆಶಿ ಹೆಸರನ್ನು ಯಾರಾದರೂ ಹೇಳಿದ್ದಾರಾ? ಈ ರಾಜ್ಯದಲ್ಲಿ ಮಹಾ ನಾಯಕರು ಬಹಳ ಮಂದಿ ಇದ್ದಾರೆ. ಬಿಜೆಪಿ ಒಳಗೆ ಒಬ್ಬ ಮಹಾ ನಾಯಕರು ಬೆಳೆಯುತ್ತಿದ್ದಾರೆ. ಹೀಗಿರುವಾಗ, ಡಿ.ಕೆ.ಶಿವಕುಮಾರ್ ಯಾಕೆ ತಮ್ಮ ಹೆಸರನ್ನು ತಾವೇ ಈ ಪ್ರಕರಣದಲ್ಲಿ ಸಿಲುಕಿಸಿಕೊಂಡಿದ್ದಾರೋ ಗೊತ್ತಿಲ್ಲ. ಅವರು ನನಗಿಂತ ಪ್ರಬುದ್ಧ ರಾಜಕಾರಣಿ. ದುಡುಕಿ ಯಾಕೆ ಈ ರೀತಿ ತಮ್ಮ ಹೆಸರನ್ನು ತಾವೇ ಪ್ರಕರಣದಲ್ಲಿ ಸಿಲುಕಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ ಎಂದು ಕುಟುಕಿದರು.

ಈ ಪ್ರಕರಣವನ್ನ ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದು, ಯಾರಿಗೂ ಗಂಭೀರತೆ ಇಲ್ಲ. ಇದರಿಂದ ರಾಜ್ಯದ ಗೌರವ ಹಾಳಾಗುತ್ತಿದೆ. ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ರಾಜ್ಯದ ಗೌರವ ಉಳಿಸಲು ನಿಷ್ಪಕ್ಷಪಾತ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

Exit mobile version