‘ವಿಜಯಾನಂದ’ ಚಿತ್ರೀಕರಣ ಶುರು

ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಮುಹೂರ್ತ ನೆರವೇರಿಸಿಕೊಂಡ ‘ವಿಜಯಾನಂದ’ ಚಿತ್ರದ ಚಿತ್ರೀಕರಣ ಭರದಿಂದ ಆರಂಭವಾಗಿದೆ.

ಹುಬ್ಬಳ್ಳಿಯಲ್ಲಿ ಮುಹೂರ್ತ ನೆರವೇರಿದ ಜಾಗಕ್ಕಿಂತ 20ಕಿ.ಮೀ ದೂರದಲ್ಲಿ ಚಿತ್ರೀಕರಣ ಶುರುವಾಗಿದ್ದು 60ದಿನಗಳ ಕಾಲ ಶೂಟಿಂಗ್ ಮುಂದುವರಿಯಲಿರುವುದಾಗಿ ನಿರ್ದೇಶಕಿ ರಿಷಿಕಾ ಶರ್ಮ ತಿಳಿಸಿದ್ದಾರೆ. ಇದು ಪದ್ಮ ಶ್ರೀ ವಿಜಯ ಸಂಕೇಶ್ವರ ಅವರ ನೈಜ ಬದುಕಿನ ಕತೆಯಾಗಿದ್ದರೂ, ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾದ ಎಲ್ಲ ಸ್ವಾತಂತ್ರ್ಯಗಳನ್ನು ಬಳಸಿಕೊಂಡೇ ಚಿತ್ರ ಮಾಡುವುದಾಗಿ ಅವರು ಹೇಳಿದ್ದಾರೆ.

ಚಿತ್ರದಲ್ಲಿ ನಿಹಾಲ್ ನಾಯಕನಾಗಿದ್ದು ಅವರಿಗೆ ಜೋಡಿಯಾಗಿ ಸಿರಿ ಪ್ರಹ್ಲಾದ್ ನಟಿಸುತ್ತಿದ್ದಾರೆ. ವಿನಯಾ ಪ್ರಸಾದ್ ಅವರು ವಿಜಯ ಸಂಕೇಶ್ವರ ಅವರ ತಾಯಿಯ ಪಾತ್ರವನ್ನು ಮಾಡಿದ್ದಾರೆ. ತಂದೆಯಾಗಿ ಅನಂತನಾಗ್ ನಟಿಸಿರುವ ಕಾರಣ ಒಂದಷ್ಟು ಸಮಯದ ಬಳಿಕ ಹಿಟ್ ಜೋಡಿ ಈ ಮೂಲಕ ಮತ್ತೆ ಒಂದಾಗಿದೆ ಎನ್ನಬಹುದು. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿಯವರು ವಿಜಯಾನಂದ ಚಿತ್ರದಲ್ಲಿ ಪ್ರಮುಖ ಖಳನಾಗಿ ಕಾಣಿಸಿಕೊಳ್ಳಲಿರುವುದು ಮತ್ತೊಂದು ವಿಶೇಷ. ‘ತನ್ನ ವ್ಯಕ್ತಿತ್ವವನ್ನು
ಉಳಿಸಿಕೊಳ್ಳಲು ಇನ್ನೊಬ್ಬರ ವ್ಯಕ್ತಿತ್ವ ಹಾಳು ಮಾಡುವ ವ್ಯಕ್ತಿಯ ಪಾತ್ರ ನನ್ನದು’ ಎಂದು ಶೈನ್ ಹೇಳಿದ್ದಾರೆ.

ನಿರ್ದೇಶಕಿ ರಿಷಿಕಾ ಚಿತ್ರದ ಮೂಲಕ ಹೊಸ ಕಲಾವಿದರಿಗೆ ಕೂಡ ಅವಕಾಶ ನೀಡಿದ್ದು, ಅವರಿಗೆ ಈಗಾಗಲೇ ತರಬೇತಿ ನೀಡಿ ಸಿದ್ಧಪಡಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಗುರುತಿಸಿಕೊಂಡಿರುವ ನಟ ಭರತ್ ಬೋಪಣ್ಣ ಕೂಡ ಒಂದು ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯುವನಟಿ ಅರ್ಚನಾ ಕೊಟ್ಟಿಗೆಯವರು ವಿಜಯಸಂಕೇಶ್ವರ ಅವರ ಪುತ್ರ ಆನಂದ್ ಸಂಕೇಶ್ವರ್ ಅವರ ಪತ್ನಿಯಾಗಿ ಕಾಣಿಸಲಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಮಲಯಾಳಂನ‌ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ನೀಡುತ್ತಿದ್ದಾರೆ.

ಮುಹೂರ್ತದ ದಿನ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲ್ಯಾಪ್ ಮಾಡಿದ್ದು ವಿಜಯ ಸಂಕೇಶ್ವರ ಅವರು ಕ್ಯಾಮೆರಾ ಚಾಲನೆ ಮಾಡಿದ್ದರು. ವಿಜಯ ಸಂಕೇಶ್ವರ ಅವರ ಬದುಕಲ್ಲಿ ಪ್ರಧಾನ ತಿರುವಿಗೆ ಕಾರಣರಾದ ಗಣೇಶ್ ಶಾ ಎನ್ನುವ ವ್ಯಕ್ತಿಯಾಗಿ ನಟಿಸಲಿರುವ ರವಿಚಂದ್ರನ್ ಕೂಡ ಸಮಾರಂಭದಲ್ಲಿ ಪಾಲ್ಗೊಂಡು‌ ವಿ ಆರ್ ಎಲ್ ಸಂಸ್ಥೆ ಮತ್ತು ಚಿತ್ರತಂಡದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

Exit mobile version