Udupi: ಕಾರ್ಕಳ (Karkala) ತಾಲ್ಲೂಕಿನಲ್ಲಿರುವ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಪ್ರತಿಮೆಯನ್ನು ಅಸಲಿ ಎಂದು ಹೇಳಲು ಆಗುತ್ತಿಲ್ಲ. ನಕಲಿ ಎಂದು ಹೇಳಲು ಆಗುತ್ತಿಲ್ಲ. ಇದು ಅರ್ಧ ನಕಲಿ ಅರ್ಧ ಅಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಪರಶುರಾಮ ಥೀಮ್ ಪಾರ್ಕ್ಗೆ ಭೇಟಿ ಕೊಟ್ಟು ಮೂರ್ತಿಯ ಅಸಲಿಯತ್ತು ಕುರಿತು ಪರಿಶೀಲನೆ ನಡೆಸಿ ಈ ಮಾತು ಹೇಳಿದ್ದಾರೆ.
ಪರಶುರಾಮ (Parashurama) ಥೀಮ್ ಪಾರ್ಕ್ನಲ್ಲಿ ಸ್ಥಾಪಿಸಲಾಗಿರುವ ಮೂರ್ತಿ ಅಸಲಿಯಲ್ಲ. ಅಧಿಕಾರಿಗಳು ಹಾಗೂ ಶಾಸಕರು ಸೇರಿ ಚುನಾವಣಾ ಗಿಮಿಕ್ ಮಾಡಲು ನಕಲಿ ಮೂರ್ತಿ ನೆಟ್ಟಿದ್ದಾರೆ ಅಂತ ಹೇಳಿ ವಿಜಯಟೈಮ್ಸ್ನ ಕವರ್ಸ್ಟೋರಿ (Cover Story) ತಂಡ ದಾಖಲೆ ಸಮೇತ ವರದಿ ಪ್ರಸಾರ ಮಾಡಿತ್ತು. ಈ ವರದಿಯು ಸಾರ್ವಜನಿಕರಲ್ಲಿ ಭಾರೀ ಸಂಚಲನವುಂಟು ಮಾಡಿದ್ದಲ್ಲದೆ, ಮೂರ್ತಿಯ ಪರಿಶುದ್ಧತೆಯ ಪರೀಕ್ಷೆ ನಡೆಯಬೇಕು ಅಂತ ಹೇಳಿ ಸಾರ್ವಜನಿಕರು ಒತ್ತಾಯ ಮಾಡಿ ಉಪವಾಸ ಸತ್ಯಾಗ್ರಹವನ್ನೂ ಪ್ರಾರಂಭಿಸಿದ್ದರು. ಈ ಬಗ್ಗೆ ಜಿಲ್ಲಾಡಳಿತ ತೇಪ ಹಾಕುವ ಉತ್ತರ ನೀಡುತ್ತಾ ಬಂದಿತ್ತು.
ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಾಗೂ ಕಾರ್ಕಳದ ಶಾಸಕರಾಗಿರುವ ಸುನಿಲ್ ಕುಮಾರ್ (Sunil Kumar)ಅವರೂ ಸಹ ಎಲ್ಲವೂ ಸರಿಯಾಗಿದೆ ಅನ್ನೋ ರೀತಿ ಸ್ಪಷ್ಟನೆ ನೀಡಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ರು. ಆದ್ರೆ ವಿಜಯಟೈಮ್ಸ್ (Vijayatimes) ಈ ಬಗ್ಗೆ ನಿರಂತರವಾಗಿ ವರದಿ ಪ್ರಸಾರ ಮಾಡುತ್ತಲೇ ಇತ್ತು . ವರದಿಗೆ ಮಣಿದ ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪರಶುರಾಮ ಥೀಮ್ ಪಾರ್ಕ್ಗೆ ಭೇಟಿನೀಡಿ ಪರಶುರಾಮ ಪ್ರತಿಮೆಯನ್ನು ಪರಿಶೀಲಿಸಿದ ಸಚಿವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪರಶುರಾಮನ ಮುಖ, ಕೈ ಸೇರಿದಂತೆ ಪ್ರತಿಮೆಯ ಅರ್ಧ ಭಾಗವನ್ನೇ ಬದಲಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.
ಈ ಪ್ರತಿಮೆಯ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸಲಾಗಿದೆ. ವಿಧಾನಸಭಾ ಚುನಾವಣೆ ಹತ್ತಿರ ಇರುವಾಗ ರಾಜಕೀಯ ಲಾಭಕ್ಕಾಗಿ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ವೇಗವಾಗಿ ಮುಗಿಸಲು ಹೋಗಿ ಹಲವು ತಪ್ಪುಗಳನ್ನು ಎಸಗಿರುವುದು ಕಂಡುಬಂದಿದೆ. ಯಾವ ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಪ್ರತಿಮೆ ವಿಚಾರದಲ್ಲಿ ರಾಜಕೀಯ ಮಾಡುವುದಕ್ಕಿಂತ ಜನರ ಸುರಕ್ಷತೆ ಮುಖ್ಯವಾಗಿದೆ. ಇದು ಎತ್ತರದ ಪ್ರದೇಶದಲ್ಲಿರುವುದರಿಂದ ಮಳೆ ಗಾಳಿಗೆ ಬಿದ್ದು ಅವಘಡಗಳಾದರೆ ಯಾರು ಹೊಣೆ ಎಂಬ ಆತಂಕ ಮೂಡುತ್ತಿದೆ. ಹಾಗಾಗಿ ಪ್ರತಿಮೆ ಸುರಕ್ಷಿತವಾಗಿದಿಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿಮೆಯನ್ನು ನಿರ್ಮಾಣ ಮಾಡಿರುವ ಬೆಂಗಳೂರಿನ (Bengaluru) ಕಲಾವಿದರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಪರಶುರಾಮ ಥೀಮ್ ಪಾರ್ಕ್ (Theme Park) ನಿರ್ಮಾಣಕ್ಕೆ 15 ಕೋಟಿ ವೆಚ್ಚವಾಗಿದ್ದು, ಪ್ರತಿಮೆಗೆ 2 ಕೋಟಿ ವ್ಯಯಿಸಲಾಗಿದೆ. ಉಡುಪಿ ನಿರ್ಮಿತ ಕೇಂದ್ರ ಕಾಮಗಾರಿಯ ಹೊಣೆ ಹೊತ್ತುಕೊಂಡಿದೆ. ಈ ವರ್ಷ ಜನವರಿ (January) 27ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ (Basavaraj Bommai) ಅವರು 33 ಅಡಿ ಎತ್ತರದ 15 ಟನ್ ತೂಕದ ಪರಶುರಾಮನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದರು. ಆಗ ಸಚಿವರು ಆಗಿದ್ದ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಅದ್ದೂರಿ ಕಾರ್ಯಕ್ರಮ ನಡೆದಿತ್ತು.
ಭವ್ಯಶ್ರೀ ಆರ್.ಜೆ