ಮಾಂಸಹಾರಿ ಪಿಜ್ಜಾ ನೀಡಿದ ರೆಸ್ಟೋರೆಂಟ್ ನಿಂದ ೧ ಕೋ.ರೂ ಪರಿಹಾರ ಕೇಳಿ ದೂರು ದಾಖಲಿಸಿದ ಮಹಿಳೆ!

ಘಜಿಯಾಬಾದ್, ಮಾ. 17: ತಮಗೆ ಸಸ್ಯಾಹಾರದ ಬದಲು ಮಾಂಸಾಹಾರಿ ಪಿಜ್ಜಾ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ನ್ಯಾಯಾಲಯ ಮೆಟ್ಟಿಲೇರಿದ್ದಾಳೆ. 2019ರ ಮಾರ್ಚ್​ 21ರಂದು ಉತ್ತರ ಪ್ರದೇಶದ ಘಜಿಯಾಬಾದ್​ನಲ್ಲಿ ಈ ಘಟನೆ ನಡೆದಿದ್ದು, 1 ಕೋಟಿ ರೂ. ಪರಿಹಾರ ಕೋರಿ ದೀಪಾಲಿ ಎಂಬ ಮಹಿಳೆಯು ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾಳೆ.

ತನ್ನ ನಿವಾಸದಲ್ಲಿ ಪಿಜ್ಜಾ ರೆಸ್ಟೋರೆಂಟ್ ನಿಂದ ಸಸ್ಯಾಹಾರಿ ಪಿಜ್ಜಾಕ್ಕಾಗಿ ಮಹಿಳೆ ಆರ್ಡರ್ ಮಾಡಿದ್ದರು. ರೆಸ್ಟೋರೆಂಟ್ ನಿಂದ ಬಂದ ಪಿಜ್ಜಾವನ್ನು ನೋಡಿದ ದೀಪಾಲಿಗೆ ಅಚ್ಚರಿ ಕಾದಿತ್ತು. ಏಕೆಂದರೆ ರೆಸ್ಟೋರೆಂಟ್​ ತಪ್ಪಾಗಿ ಮಾಂಸಾಹಾರಿ ಪಿಜ್ಜಾ ನೀಡಲಾಗಿತ್ತು. ಇದರಿಂದ ಕೋಪಗೊಂಡ ಮಹಿಳೆಯು ಗ್ರಾಹಕ ನ್ಯಾಯಾಲಯಕ್ಕೆ ಪಿಜ್ಜಾ ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದಾಳೆ.

“ಪಿಜ್ಜಾ ಆರ್ಡರ್ ಮಾಡಿದ್ದ ದಿನದಂದು ಹೋಳಿ ಹಬ್ಬ ಆಚರಿಸಿದ್ದೆವು. ಹೋಳಿ ಹಬ್ಬ ಆಚರಣೆ ಮಾಡಿದ ನಂತರ ನಮ್ಮ ಕುಟುಂಬದ ಸದಸ್ಯರೆಲ್ಲರಿಗೂ ತುಂಬ ಹಸಿವಾಗಿದ್ದ ಕಾರಣ ಸಸ್ಯಾಹಾರಿ ಪಿಜ್ಜಾ ಆರ್ಡರ್ ಮಾಡಿದ್ದೆ. ಪಿಜ್ಜಾ ನಿಗದಿತ ಸಮಯಕ್ಕೆ ಬಾರದೆ 30 ನಿಮಿಷ ತಡವಾಗಿ ಡೆಲಿವರಿ ಮಾಡಿದ್ದಲ್ಲದೆ, ಸಸ್ಯಾಹಾರಿಯ ಬದಲು ಮಾಂಸಾಹಾರಿ ಪಿಜ್ಜಾ ನೀಡಿದ್ದಾರೆ ಎಂದು ಸೇವಿಸಿದ ನಂತರ ತಿಳಿಯಿತು. ಅಣಬೆ ಬದಲು ಅದರಲ್ಲಿ ಮಾಂಸದ ತುಣುಕುಗಳನ್ನು ಪಿಜ್ಜಾದಲ್ಲಿ ಬಳಸಿದ್ದಾರೆ” ಎಂದು ದೀಪಾಲಿ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

ತಮಗೆ ನೀಡಿರುವುದು ಮಾಂಸಾಹಾರಿ ಪಿಜ್ಜಾ ಎಂದು ತಿಳಿದ ತಕ್ಷಣ ಗ್ರಾಹಕರ ನ್ಯಾಯಾಲಯಕ್ಕೆ ‌ ಕರೆ ಮಾಡಿ ದೀಪಾಲಿ ದೂರು ನೀಡಿದ್ದರು. ನಂತರ ಪಿಜ್ಜಾ ರೆಸ್ಟೋರೆಂಟ್​ನ ಆಫೀಸರ್ ದೀಪಾಲಿಗೆ ಕರೆ ಮಾಡಿ, ತಮ್ಮ ಔಟ್‌ಲೆಟ್‌ನಿಂದ ಕುಟುಂಬದ ಸದಸ್ಯರೆಲ್ಲರಿಗೂ ಉಚಿತವಾಗಿ ಪಿಜ್ಜಾ ನೀಡುವುದಾಗಿ ಹೇಳಿದರು. ಆದರೆ ದೀಪಾಲಿಯು ಇದು ಸಾಧಾರಣ ಪ್ರಕರಣವಲ್ಲ. ಇದರಿಂದ ನನ್ನ ಧಾರ್ಮಿಕ ಭಾವನೆ ಹಾಗೂ ಸಂಪ್ರದಾಯಕ್ಕೆ ಧಕ್ಕೆಯಾಗಿದೆ. ಇದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದು, ಸಾಮಾನ್ಯ ಸ್ಥಿತಿಗೆ ಮರಳಿ ಬರಲು ಹಣ ವ್ಯಯಿಸಬೇಕಾಗುತ್ತದೆ ಎಂದು ದೂರಿನಲ್ಲಿ ದೀಪಾಲಿ ವಿವರಿಸಿದ್ದಾರೆ.

ಪ್ರಕರಣವನ್ನು ಕೈಗೆತ್ತಿಕೊಂಡಿರುವ ದೆಹಲಿ ಜಿಲ್ಲಾ ಗ್ರಾಹಕ ನ್ಯಾಯಾಲಯವು, ಮಹಿಳೆಯ ದೂರಿನ ಅರ್ಜಿಗೆ ಉತ್ತರಿಸುವಂತೆ ಪಿಜ್ಜಾ ರೆಸ್ಟೊರೆಂಟ್ಗೆ ಆದೇಶಿಸಿದ್ದು, ಮಾರ್ಚ್ 17ಕ್ಕೆ ವಿಚಾರಣೆಯನ್ನು ಮುಂದೂಡಿದೆ.

Exit mobile version