ಮೈಸೂರು, ಅ. 23: ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಸಂಬಂಧದ ವಿಚಾರಣೆಯನ್ನು ಸಿಎಟಿ ಮತ್ತೆ ಮುಂದೂಡಿದೆ. ನವೆಂಬರ್ 3ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಈವರೆಗೆ ಸತತ ಮೂರು ಬಾರಿಗೆ ವಿಚಾರಣೆಯನ್ನು ಮುಂದೂಡಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಕೆಲವೇ ದಿನಗಳಲ್ಲಿ ಬಿ.ಶರತ್ ಅವರನ್ನು ವರ್ಗಾಯಿಸಲಾಗಿತ್ತು. ಆ ಸ್ಥಾನಕ್ಕೆ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಲಾಯಿತು. ಅವಧಿಗೂ ಮುನ್ನವೇ ತಮ್ಮ ವರ್ಗಾವಣೆ ಆಗಿರುವುದನ್ನು ಪ್ರಶ್ನಿಸಿ ಶರತ್ ಅವರು ಸಿಎಟಿಗೆ ಅರ್ಜಿ ಸಲ್ಲಿಸಿದ್ದರು.