ಎನ್ ಕೌಂಟರ್ ಬಗ್ಗೆ ಅತ್ಯಾಚಾರ ಸಂತ್ರಸ್ತೆಯ ತಂದೆ ಹೇಳಿದ್ದೇನು ಗೊತ್ತಾ..?

ಹೈದರಾಬಾದ್, ಡಿ.06: ಹೈದರಾಬಾದ್‌ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯನ್ನು ಜೀವಂತ ಸುಟ್ಟಿದ್ದ ನಾಲ್ವರು ಕಾಮುಕರನ್ನು, ಕೃತ್ಯ ಎಸಗಿದ ಸ್ಥಳದಲ್ಲಿಯೇ ತೆಲಂಗಾಣ ಪೊಲೀಸರು  ಎನ್‌ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಂತ್ರಸ್ತೆ ತಂದೆ ತೆಲಂಗಾಣ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 

‘ನನ್ನ ಮಗಳು ಸಾವನ್ನಪ್ಪಿ ಹತ್ತು ದಿನವಾಯ್ತು, ಈಗ ನನ್ನ ಮಗಳ ಆತ್ಮಕ್ಕೆ ಶಾಂತಿ ದೊರಕಿದೆ. ನಾನು ಪೊಲೀಸ್ ಇಲಾಖೆಗೆ ಹಾಗೂ ತೆಲಂಗಾಣ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ. ಇತ್ತ ದೆಹಲಿಯ ನಿರ್ಭಯಾ ತಾಯಿ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಒಬ್ಬ ಸಂತ್ರಸ್ತೆಗಾದರೂ ನ್ಯಾಯ ದೊರಕಿದೆ’ ಎಂದು ಹೇಳಿದ್ದಾರೆ.

ಇಂದು ಬೆಳಿಗ್ಗೆ ಚತ್ತನಪಲ್ಲಿ ಬಳಿ ನಾಲ್ವರು ಆರೋಪಿಗಳಾದ ನವೀನ್, ಮೊಹಮ್ಮದ್ ಆರೀಫ್, ಚೆನ್ನಕೇಶವುಲು, ಶಿವಾ ಅವರನ್ನು ಎನ್‌ಕೌಂಟರ್‌ ನಲ್ಲಿ ಕೊಲ್ಲಲಾಗಿದೆ. ಆರೋಪಿಗಳನ್ನು ಸ್ಥಳ ಮಹಜರ್ ಮಾಡಲು ಕರೆದುಕೊಂಡು ಹೋಗಿದ್ದ ವೇಳೆ ಆರೋಪಿಗಳು ಪೊಲೀಸರ ಮೇಲೆ ಕಲ್ಲು ತೂರಿ ಪರಾರಿ ಆಗಲು ಯತ್ನಿಸಿದ್ದು, ಪೊಲೀಸರು ಅವರನ್ನು ಗುಂಡು ಹೊಡೆದು ಕೊಂದಿದ್ದಾರೆ.

ನವೆಂಬರ್ 27 ರಂದು ಪಶುವೈದ್ಯೆ ದಿಶಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆ ಬದುಕಿರುವಾಗಲೇ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲ್ಲಲಾಗಿತ್ತು.

Exit mobile version