ಕನ್ನಡದ ಮೊದಲ ವಾಕ್ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಇನ್ನಿಲ್ಲ..

ಕನ್ನಡದಲ್ಲಿ ಸಟ್ಟೇರಿದ ಮೊದಲ ವಾಕ್ಚಿತ್ರವಾಗಿರುವ ‘ಭಕ್ತಧ್ರುವ'(1934)ದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಎಸ್.ಕೆ.ಪದ್ಮಾದೇವಿ ವಯೋಸಮಸ್ಯೆಯಿಂದ ಇಂದು ನಿಧನರಾಗಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿಬೆಳೆದಿದ್ದ ಅವರಿಗೆ ಸದ್ಯ 95 ವರ್ಷ ವಯಸ್ಸಾಗಿತ್ತು. ಬಳ್ಳಾರಿಯ ರಾಘವಾಚಾರ್ಯರ ಮೂಲಕ ರಂಗಭೂಮಿ ಪ್ರವೇಶಿಸಿದ ಅವರು ಹೆಚ್.ಎಲ್.ಎಸ್.ಸಿಂಹ ಅವರ ನಾಟಕ ಕಂಪೆನಿಯಲ್ಲಿ ಅಭಿನಯಿಸಿದರು. ಆ ಮೂಲಕ ಸ್ವಂತ ನಾಟಕ ಕಂಪೆನಿಯನ್ನು ಕಟ್ಟಿದರು.

ಸಂಸಾರನೌಕ’ (1936) ಹೆಸರು ತಂದು ಕೊಟ್ಟ ಚಿತ್ರ. ಈ ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಹಾಡಿದರು. ಒಂದು ಹಾಡನ್ನು ಸ್ವತಃ ಇವರೇ ವೀಣೆ ನುಡಿಸಿಕೊಂಡು ಹಾಡಿದ್ದರು. ‘ವಸಂತಸೇನ’, ‘ಭಕ್ತ ಸುಧಾಮ’, ‘ಜಾತಕ ಫಲ’ ಚಿತ್ರಗಳಲ್ಲಿಯೂ ನಟಿಸಿದರು. ‘ಭಕ್ತಸುಧಾಮ’ದಲ್ಲಿ ಮಧುಗಿರಿ ಮೀನಾಕ್ಷಿ ಎಂದು ಹೆಸರು ಬದಲಾಯಿಸಿಕೊಂಡರು.

ಎರಡು ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿದರು. ರಂಗಭೂಮಿಯಲ್ಲೇ ತೊಡಗಿಕೊಂಡು ಬಹಳ ಕಾಲ ಚಲನಚಿತ್ರದ ಅಭಿನಯ ನಿಲ್ಲಿಸಿದರು. ‘ಮುಕ್ತಿ’, ‘ಅಮರ ಮಧುರ ಪ್ರೇಮ’, ‘ಸಂಕ್ರಾಂತಿ’ ಚಿತ್ರಗಳಲ್ಲಿ ಅಭಿನಯಿಸಿದರು. ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕ್ರೌರ್ಯ’ ಚಿತ್ರದ ರೇಣುಕಮ್ಮ ಮುರಗೊಡು ಅವರ ಪಾತ್ರಕ್ಕೆ ಕಂಠದಾನ ಮಾಡಿದರು.

ಮಗ ನಂದಕಿಶೋರ್ ನಿರ್ದೇಶಿಸಿದ ‘ಕಿರಣ’ ಟೆಲಿ ಫಿಲಂನಲ್ಲಿ ಅಜ್ಜಿ ಪಾತ್ರ ಮಾಡಿದರು. ಆಕಾಶವಾಣಿಯಲ್ಲಿ ಅನೇಕ ವರ್ಷಗಳು ಕೆಲಸ ಮಾಡಿದ ಪದ್ಮಾದೇವಿಯವರು ಆ ಮಾಧ್ಯಮದಲ್ಲಿಯೂ ಹೆಸರು ಮಾಡಿದವರು.

Exit mobile version