ಬೆಂಗಳೂರು, ಅ.23: ಮಹಾಮಾರಿ ಕೊರೋನಾ ದೇಶಾದ್ಯಂತ ಆವರಿಸಿದಾಗಿನಿಂದ ಶಾಲಾ ಕಾಲೇಜುಗಳು ಸ್ತಬ್ಧವಾಗಿವೆ. ಆದರೂ ಅಂತಿಮ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷೆಯನ್ನು ನಡೆಸಿ ಮೌಲ್ಯಮಾಪನ ಹಂತದಲ್ಲಿದೆ. ಈಗ ರಾಜ್ಯ ಸರ್ಕಾರಗಳ ಕಾಲೇಜುಗಳ ಆರಂಭದ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಲೇಜು ಆರಂಭದ ಬಗ್ಗೆ ಚರ್ಚಿಸಲಾಗಿದ್ದು, ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಅಶ್ವಥನಾರಾಯಣ್ ಅವರು ಪ್ರಾತ್ಯಕ್ಷಿಕೆ ಮೂಲಕ ಕಾಲೇಜು ಆರಂಭಿಸುವ ಬಗ್ಗೆ ಹಾಗೂ ತೆಗೆದುಕೊಳ್ಳಲಿರುವ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಬೇರೆ ರಾಜ್ಯದಲ್ಲಿ ಕಾಲೇಜು ಓಪನ್ ಆಗಿದ್ದು, ಅಲ್ಲಿನ ಪರಿಸ್ಥಿತಿ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ಮಾಡಲಾಯಿತು. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಪ್ರತಿ ವಿದ್ಯಾರ್ಥಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡುವ ಬಗ್ಗೆಯೂ ತೀರ್ಮಾನಿಸಲಾಯಿತು. ಈ ಎಲ್ಲ ಚರ್ಚೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅಶ್ವಥನಾರಾಯಣ್, ನವೆಂಬರ್ 17ರಂದು ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಆದರೆ ತರಗತಿ ಬರುವುದು ಕಡ್ಡಾಯವಲ್ಲ ಎಂದು ತಿಳಿಸಿದ್ದಾರೆ.
ಪೋಷಕರ ಅನುಮತಿ ಮೇರೆಗೆ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು. ಕಾಲೇಜಿಗೆ ಬರುವುದು-ಬಿಡುವುದು ವಿದ್ಯಾರ್ಥಿಗಳ ಆಯ್ಕೆ. ಆನ್ಲೈನ್ ಮುಖಾಂತರ ಬೇಕಾದರೂ ಕ್ಲಾಸ್ ತೆಗೆದುಕೊಳ್ಳಬಹುದು. ಪ್ರಾಕ್ಟಿಕಲ್ ಕ್ಲಾಸ್ಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಎಲ್ಲಾ ಕಾಲೇಜಿನಲ್ಲೂ ಟಾಸ್ಕ್ ಪೋರ್ಸ್ ಇರುತ್ತದೆ. ಪೋಷಕರು ರೈಟಿಂಗ್ ಮೂಲಕ ಒಪ್ಪಿಗೆ ಸೂಚಿಸಿದರಷ್ಟೇ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಲಾಗುತ್ತದೆ. ಯಾರಿಗೂ ಒತ್ತಾಯವಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ನೋಡಿಕೊಂಡು ಹಂತಹಂತವಾಗಿ ತರಗತಿಗಳನ್ನು ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.