ಯಾದಗಿರಿ ತಾಲೂಕಿನ ಕಿಲ್ಲನಕೇರಾ ಗ್ರಾಮಸ್ಥರು ಚರಂಡಿ ಸ್ವಚ್ಚಮಾಡಿ ತ್ಯಾಜ್ಯವನ್ನು ಗ್ರಾಮ ಪಂಚಾಯತಿ ಬಾಗಿಲ ಮುಂದೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದ ಘಟನೆಯೊಂದು ನಡೆದಿದೆ. ಯಾಕೆ ಅಂತ ನೋಡೋಣ ಬನ್ನಿ. ಕಿಲ್ಲನಕೇರಾ ಗ್ರಾಮದ ಎರಡನೇ ವಾರ್ಡಿನ ಬೀದಿಗಳಲ್ಲಿರವ ಜನರ ದುಸ್ಥಿತಿ ಏನೆಂದರೆ ಇಲ್ಲಿನ ಚರಂಡಿಗಳಲ್ಲಿ ಕಸ ಕಡ್ಡಿ, ಊಳು ತುಂಬಿಕೊಂಡಿದ್ದು, ಇದರಿಂದ ಕೊಳಚೆ ನೀರು ನಿಲ್ಲುವುದರಿಂದ ಅಲ್ಲಿನ ನಿವಾಸಿಗಳು ಸೊಳ್ಳೆ ಕಾಟದಿಂದ ನಿತ್ಯವೂ ಸಂಕಷ್ಟವನ್ನು ಅನುಭವಿಸುವಂತಾಗಿದೆ.ಚರಂಡಿಗಳಲ್ಲಿ ಕಲುಷಿತ ನೀರು ತುಂಬಿ ಈ ಕಲುಷಿತ ನೀರು ರಸ್ತೆಗಳಲ್ಲಿ ಹರಿಯುವುದರಿಂದ ಮನೆಗಳ ಒಳಗೆ ಗಬ್ಬು ವಾಸನೆ ಬೀರುತ್ತಿದೆ. ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಕಸ ಕಡ್ಡಿಗಳು ತುಂಬಿ ಗಬ್ಬು ನಾರುವುದರಿಂದ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಅವುಗಳನ್ನು ತೆರವುಗೊಳಿಸಿ ಸ್ವಚ್ಚಗೊಳಿಸುವ ಕಾರ್ಯವನ್ನು ಮಾಡದೆ ನಿರ್ಲಕ್ಷ್ಯ ವಹಿಸಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದರ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ನಿರ್ಲಿಪ್ತವಾಗಿತ್ತು ಗ್ರಾಮ ಪಂಚಾಯತ್ ಅಧಿಕಾರೀ ವರ್ಗ. ಇದರಿಂದ ಬೇಸತ್ತ ಸ್ಥಳಿಯರು ತಾವೇ ಮುಂದಾಗಿ ಚರಂಡಿ ಸ್ವಚ್ಛ ಮಾಡಿ ಕೊಳಕು ಕಸ ಕಡ್ಡಿಗಳನ್ನು ಗ್ರಾಮ ಪಂಚಾಯತ್ ಮುಂದೆ ಸುರಿದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಗ್ರಾಮದ ಯುವಕ ಬೀರಲಿಂಗಪ್ಪ ಎದ್ದೇರಿ ಮಾತನಾಡಿ , ಸುಮಾರು ದಿನಗಳಿಂದ ಚರಂಡಿ ಊಳು ತುಂಬಿ ಹರಿಯುತ್ತಿದೆ. ಪ್ರತಿಸಲ ಚರಂಡಿಯನ್ನು ನಾವೇ ಸ್ವಚ್ಚ ಮಾಡುತ್ತೇವೆ.ನಮ್ಮೂರಲ್ಲಿ ಅಧಿಕಾರಿಗಳು ಬದುಕಿದ್ದಾರೋ ಅಥವಾ ಸತ್ತಿದ್ದಾರೋ ಎಂದು ಅನುಮಾನ ವ್ಯಕ್ತವಾಗುತ್ತಿದೆ.ತ್ಯಾಜ್ಯವನ್ನು ಗ್ರಾಮ ಪಂಚಾಯತಿ ಮುಂದೆ ಹಾಕುತ್ತಿರುವುದು ಮೊದಲನೆ ಹಂತವಾಗಿದೆ. ಮತ್ತೆ ನಿರ್ಲಕ್ಷ್ಯ ವಹಿಸಿದರೆ , ತಾಲೂಕು ಪಂಚಾಯತಿ , ಜಿಲ್ಲಾ ಪಂಚಾಯತಿ ಅಲ್ಲದೇ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಹಾಕಬೇಕಾಗುತ್ತದೆ.ಇದು ನಾವು ಮಾಡುತ್ತಿರುವ ಮನವಿ ಹಾಗೂ ಎಚ್ಚರಿಕೆಯಾಗಿದೆ ಎಂದರು.
- ಬೀರಲಿಂಗಪ್ಪ ಯೆದ್ದೇರಿ