ಬಡತನದಿಂದ ತತ್ತರಿಸಿರುವ ಕೇರಳದ ಮಹಿಳೆಯೊಬ್ಬರು ತನ್ನ ಮಕ್ಕಳ ಚಿಕಿತ್ಸೆಗಾಗಿ ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡಲು ಮುಂದಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಕೇರಳದ ಕೊಚ್ಚಿ ನಿವಾಸಿಯಾಗಿರುವ 44 ವರ್ಷದ ಶಾಂತಿ ಎಂಬುವರು, ತಮ್ಮ ಐವರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಆದರೆ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಮಗುವಿನ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಲುವಾಗಿ ಶಾಂತಿ ಅವರು, ತಮ್ಮ ಹೃದಯ ಸೇರಿದಂತೆ ದೇಹದ ಅಂಗಾಂಗಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ಈ ಬಗ್ಗೆ ಫಲಕವನ್ನು ಬರೆದು ರಸ್ತೆ ಬದಿಯಲ್ಲಿರಿಸುವ ಮೂಲಕ ಗಮನ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಶಾಂತಿ ಅವರ ಹಿರಿಯ ಪುತ್ರ 2019ರಲ್ಲಿ ಅಪಘಾತಕ್ಕೀಡಾಗಿದ್ದು, ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಈಕೆಯ ದ್ವಿತೀಯ ಮಗ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದು, ಇವರ 11 ವರ್ಚದ ಮಗಳು ಸಹ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಈ ನಡುವೆ ಶಾಂತಿ ಅವರ ತೃತೀಯ ಪುತ್ರ ಕೋವಿಡ್-19 ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದು, ಮತ್ತೊಬ್ಬ ಮಗ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಎನ್ನಲಾಗಿದೆ.
ಬಾಡಿಗೆ ಮನೆವೊಂದರಲ್ಲಿ ವಾಸವಾಗಿರುವ ಶಾಂತಿ ಅವರು, ಸದ್ಯ ಆರ್ಥಿಕ ಸಮಸ್ಯೆಯಿಂದಾಗಿ ಬಾಡಿಗೆ ಪಾವತಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಮೂವರು ಮಕ್ಕಳು ತೀವ್ರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇವರುಗಳ ಚಿಕಿತ್ಸೆಗೆ ಕನಿಷ್ಠ 20 ಲಕ್ಷ ರೂ.ಗಳ ಅಗತ್ಯವಿದೆ. ಆದರೆ ಯಾರೊಬ್ಬರು ಇವರ ನೆರವಿಗೆ ಬರುತ್ತಿಲ್ಲ ಎಂಬುದು ಶಾಂತಿ ಅವರ ಅಳಲು.
ಈ ನಡುವೆ ಮಾಧ್ಯಮಗಳ ಮೂಲಕ ಶಾಂತಿ ಅವರು ಸಮಸ್ಯೆ ಅರಿತ ಕೇರಳ ಸರ್ಕಾರ, ಶಾಂತಿ ಅವರ ಮಕ್ಕಳಿಗೆ ಚಿಕಿತ್ಸೆ ಕೊಡಿಸಿ, ವಸತಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.