ಚೆನ್ನೈ, ನ. 18: ರಾಜಕಾರಣಿ ಮತ್ತು ನಟಿ ಖುಷ್ಬೂ ಸುಂದರ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟಾವಶತ್ ಯಾವುದೇ ಅಪಾಯ ಸಂಭವಿಸಿಲ್ಲ.
ಬಿಜೆಪಿ ವತಿಯಿಂದ ತಮಿಳುನಾಡಿನ ಕೂಡಲೂರು ಬಳಿ ಹಮ್ಮಿಕೊಂಡಿದ್ದ ವೇಲ್ ಯಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಬುಧವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ನಟಿ ಖುಷ್ಬೂ ತಮ್ಮ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮೇಲ್ಮರತ್ತೂರು ಬಳಿ ಬಲಗಡೆಯಿಂದ ಬಂದ ಕಂಟೈನರ್ ಖುಷ್ಪೂ ಕಾರಿಗೆ ಗುದ್ದಿದೆ. ಪರಿಣಾಮ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಆದರೆ ಈ ವೇಳೆ ಕಾರಿನಲ್ಲಿದ್ದ ನಟಿ ಖುಷ್ಬೂ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಈ ಬಗ್ಗೆ ಟ್ವೀಟ್ ಮಾಡಿರುವ ಖುಷ್ಬೂ, ತಮ್ಮ ಕಾರು ಅಪಘಾತಕ್ಕೀಡಾಗಿದ್ದು, ಮುರುಗನ್ ದಯೆಯಿಂದ ಯಾವುದೇ ಹಾನಿ ಆಗಿಲ್ಲ. ನಾನು ಸುರಕ್ಷಿತವಾಗಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವುದಾಗಿ ತಿಳಿಸಿದ್ದಾರೆ.