“ನಿಮ್ಮ ಸರ್ಕಾರ ಮಹಿಳೆಗೆ ಕಿರುಕುಳ ನೀಡುತ್ತಿದ್ದು, ಮಹಾರಾಷ್ಟ್ರ ಸರ್ಕಾರ ನನ್ನನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಕಂಡು ನಿಮಗೆ ದುಃಖ ಆಗುತ್ತಿಲ್ಲವೇ?” ಹೀಗೆಂದು ಬಾಲಿವುಡ್ ನಟಿ ಕಂಗನಾ ರಣಾವತ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದಿಂದ ತಮಗಾಗುತ್ತಿರುವ ತೊಂದರೆಯ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಂಗನಾ, “ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಪ್ರೀತಿಯ ಸೋನಿಯಾ ಗಾಂಧಿ ಜೀ, ಮಹಾರಾಷ್ಟ್ರ ಸರ್ಕಾರ ನನ್ನನ್ನು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಮಹಿಳೆಯಾಗಿ ನಿಮಗೆ ದುಃಖ ಆಗುತ್ತಿಲ್ಲವೇ? ಡಾ. ಅಂಬೇಡ್ಕರ್ ಅವರು ನೀಡಿರುವ ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ಹಿಡಿಯುವಂತೆ ನಿಮ್ಮ ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಪಶ್ವಿಮದಲ್ಲಿ ಬೆಳೆದ ನೀವು ಭಾರತದಲ್ಲಿ ವಾಸವಾಗಿದ್ದೀರಾ. ಮಹಿಳೆಯರ ಸಮಸ್ಯೆಗಳ ಬಗ್ಗೆ ನಿಮಗೆ ಅರಿವಿರಬೇಕು. ನಿಮ್ಮದೇ ಸರ್ಕಾರ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವಾಗ, ಕಾನೂನು ಮತ್ತು ಸುವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವಾಗ ನೀವು ಅನುಸರುತ್ತಿರುವ ಮೌನ ಮತ್ತು ಉದಾಸೀನತೆಯನ್ನು ಇತಿಹಾಸವೇ ತೀರ್ಮಾನಿಸಲಿದೆ. ನೀವು ಮಧ್ಯ ಪ್ರವೇಶಿಸುತ್ತೀರಾ ಎಂದು ಭಾವಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.