ಫೋನ್ ಕದ್ದಾಲಿಕೆಯೇ ಮೈತ್ರಿ ಸರ್ಕಾರದಲ್ಲಿ ಶಾಸಕರು ರಾಜೀನಾಮೆ ನೀಡಲು ಕಾರಣವಂತೆ

ಮೈಸೂರು: ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಶಾಸಕರು ರಾಜೀನಾಮೆ ನೀಡಲು ಫೋನ್ ಕದ್ದಾಲಿಕೆಯು ಸಹ ಪ್ರಮುಖ ಕಾರಣವಾಗಿದೆ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡ ಎಚ್. ವಿಶ್ವನಾಥ ಹೇಳಿದ್ದಾರೆ. 

ರಾಜೀನಾಮೆ ಕೊಟ್ಟ ಎಲ್ಲ ಶಾಸಕರ ಫೋನ್ ಸಂಭಾಷಣೆಯನ್ನು ಕದ್ದಾಲಿಕೆ ಮಾಡಿದ್ದಾರೆ. ರಾಜೀನಾಮೆ ಸಂದರ್ಭದಲ್ಲಿ ಸಿಎಂ ಕಚೇರಿಯಿಂದ ‘ನೀವು ಕರೆ ಮಾಡಿರುವ ಎಲ್ಲ ದಾಖಲೆಗಳು ಸಿಕ್ಕಿವೆ, ವಾಪಸ್ ಬನ್ನಿ’ ಎನ್ನುತ್ತಿದ್ದರು. ಈ ಕುರಿತು ಕೇಂದ್ರ ಸರ್ಕಾರ ಸಹ ಯೋಚನೆ ಮಾಡಬೇಕು ಎಂದರು. 

ಹಿಂದಿನ‌ ಸರ್ಕಾರದಲ್ಲೂ ಫೋನ್ ಕದ್ದಾಲಿಕೆ ನಡೆದಿರಬಹುದು. ಆದರೆ, ನಮ್ಮ ಮೈತ್ರಿ ಸರ್ಕಾರದಲ್ಲಿ ಮನೆಯವರಿಗೇ ಮದ್ದು ಹಾಕುವ ಕೆಲಸ ನಡೆದಿದೆ. ಗೃಹ ಸಚಿವರು ಸೇರಿದಂತೆ, 300 ಜನರ ಪೋನ್ ಕದ್ದಾಲಿಸಲಾಗಿದೆ ಎಂದು ಆರೋಪಿಸಿದರು. 

ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದವನು. ನನ್ನ ಪೋನ್ ಸಂಭಾಷಣೆಯನ್ನು ಸಹ ಮುಖ್ಯಮಂತ್ರಿ ಕುಮಾರಸ್ವಾಮಿ ಕದ್ದಾಲಿಕೆ ಮಾಡಿದ್ದಾರೆ. ಅವರಿಗೆ, ಪಕ್ಷದ ಶಾಸಕರ, ರಾಜ್ಯಾಧ್ಯಕ್ಷರ ಮೇಲೆಯೇ ನಂಬಿಕೆ ಇರಲಿಲ್ಲ. ನನ್ನ ಪೋನ್‌ನಲ್ಲಿ ಮಾತನಾಡೋದು ನನ್ನ ಹಕ್ಕು. ನಾನು ನನ್ನ ಹೆಂಡತಿ ಫೋನ್ ಸಂಭಾಷಣೆಯನ್ನು ಕದ್ದಾಲಿಕೆ ಮಾಡೋದು ಸಹ ಕಾನೂನು ಪ್ರಕಾರ ಅಪರಾಧ. ನಮ್ಮ ರಾಜೀನಾಮೆಗೆ ಇದು ಸಹ ಮುಖ್ಯ ಕಾರಣ ಎಂದು ತಿಳಿಸಿದರು. 

ನಮ್ಮ ಫೋನ್ ಕರೆ ಕದ್ದಾಲಿಕೆ ಮಾಡುತ್ತಿರುವ ಕುರಿತು ಬಿಜೆಪಿಯ ಆರ್. ಅಶೋಕ್, ಕಾಂಗ್ರೆಸ್’ನ ಎಚ್.ಕೆ. ಪಾಟೀಲ್ ಅವರು ಆರು ತಿಂಗಳ ಹಿಂದೆ ಸೂಚನೆ ಕೊಟ್ಟಿದ್ದರು ಎಂದ ವಿಶ್ವನಾಥ, ಹಿರಿಯ ಐಪಿಎಸ್ ಅಧಿಕಾರಿ ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್ ಅವರ ಫೋನ್ ಸಂಭಾಷಣೆಯನ್ನು ಕದ್ದಾಲಿಕೆ ಮಾಡಿದ್ದಾರೆ. ಆ ಮೂಲಕ ಹಿಂದಿನ ಸಿಎಂ ಕುಮಾರಸ್ವಾಮಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. 

Exit mobile version