ನೆಲಮಂಗಲ, ಅ. 24: ಸತತ ಎರಡು ವರ್ಷಗಳಿಂದ ಬೆಂಳ್ಳಂದೂರಿನ ಬಳಿಯ ಕಾಲುವೆಯಲ್ಲಿ ನೊರೆ ಸಮಸ್ಯೆ ವರ್ಷಂಪ್ರತಿ ಎಂಬಂತೆ ಸಾಮಾನ್ಯವಾಗಿದೆ. ಆಗಾಗ ಮತ್ತೆ ಮತ್ತೆ ನೊರೆ ಏಳುತ್ತಲೇ ಇದೆ. ಆ ಸಮಸ್ಯೆಗೆ ಇನ್ನು ಶಾಶ್ವತ ಪರಿಹಾರವೇ ದೊರೆತಿಲ್ಲ ಇದರ ಮಧ್ಯೆ ಬೆಂಗಳೂರು ಹೊರವಲಯದ ನೆಲಮಂಗಲ ನಗರದ ಅಮಾನಿಕೆರೆ ಹಾಗೂ ಬಿನ್ನಮಂಗಲ ಕರೆಯಲ್ಲಿ ಭಾರೀ ನೊರೆ ಹೊರ ಬರುತ್ತಿದ್ದು, ಬೆಳ್ಳಂದೂರು ನೊರೆ ಸಮಸ್ಯೆಯನ್ನು ನೆನಪಿಸುವಂತಿದೆ.
ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿರುವಂತಹ ಅಮಾನಿಕೆರೆ ಭರ್ತಿಯಾಗಿ ನೀರು ಹೊರ ಬರುತ್ತಿವೆ. ಇಂತಹ ನೀರು ಹೊರ ಬರುತ್ತಿರುವ ಬಳಿಯಲ್ಲಿಯೇ ನೊರೆ ಕೂಡ ಎದ್ದಿದೆ. ನೊರೆ ಅಕ್ಕ ಪಕ್ಕದ ಸ್ಥಳೀಯ ನಿವಾಸಗಳತ್ತ ಹಾರಿ ಬರುತ್ತಿರುವುದರಿಂದ, ಜನರಲ್ಲಿ ಆತಂಕ ಮನೆಮಾಡಿದೆ.
ಎರಡು ದಿನದಿಂದ ಎಡೆಬಿಡದೇ ಸುರಿದಂತಹ ಭಾರಿ ಮಳೆಯಿಂದಾಗಿ ಅಮಾನಿಕೆರೆ ಹಾಗೂ ಭಿನ್ನಮಂಗಲ ಕೆರೆ ಭರ್ತಿಯಾಗಿ ಕೋಡಿ ಬಿದ್ದು ನೀರು ಹೊರ ಹರಿಯುತ್ತಿದೆ. ಇದರ ಒಟ್ಟಿಗೆ ನೊರೆ ಕೂಡ ಹಾರಿ ಬರುತ್ತಿದೆ. ಕೆರೆ ಮಲಿನಗೊಂಡಿರುವುದರಿಂದಲೇ ನೊರೆ ಏಳುತ್ತಿರುವುದಕ್ಕೆ ಕಾರಣ ಎನ್ನುವುದು ಸ್ಥಳೀಯ ಅಭಿಪ್ರಾಯವಾಗಿದೆ.