ಬೆಂಗಳೂರು, ಅ. 19: ಸಂಚಾರ ನಿಯಮ ಉಲ್ಲಂಘನೆ ದಂಡ ದುಬಾರಿಗೊಳಿಸಿದ ರಾಜ್ಯ ಸರ್ಕಾರವು ಬೈಕ್ ಸವಾರರಿಗೆ ನೂತನ ನಿಯಮವನ್ನು ಜಾರಿಗೊಳಿಸಿ, ಮತ್ತೊಂದು ಶಾಕ್ ನೀಡಿದೆ. ರಾಜ್ಯದ ನಗರ ಪ್ರದೇಶಗಳಲ್ಲಿ ಮಾತ್ರವೇ ಜಾರಿಯಲ್ಲಿದ್ದಂತಹ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮವನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಅದಲ್ಲದೇ, ನಿಯಮವನ್ನು ಉಲ್ಲಂಘಿಸಿ, ಸಂಚಾರಿ ಪೊಲೀಸರ ಬಳಿ ಸಿಕ್ಕಿಬಿದ್ದರೇ, ಅಂತಹ ವಾಹನ ಸವಾರರ ಪರವಾನಗಿಯನ್ನೇ ಮೂರು ತಿಂಗಳು ಅಮಾನತುಗೊಳಿಸುವಂತೆ ಸಾರಿಗೆ ಇಲಾಖೆ ಆದೇಶಿಸಿದೆ.
ಕೇಂದ್ರ ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ರಾಜ್ಯದಲ್ಲೂ ಜಾರಿಗೊಳಿಸಿದ್ದು, ಅನೇಕ ವಾಹನ ಸವಾರರು ಸಂಚಾರ ನಿಯಮವನ್ನು ಮೀರುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆಗೊಂಡಿಲ್ಲ. ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಹೆಲ್ಮೆಟ್ ಧರಿಸದೇ ಸಂಚರಿಸುವ ಸವಾರರ ವಿರುದ್ಧ ವಾಹನಗಳ ಕಾಯ್ದೆ 1988 ಕಲಂ 194-ಟಿ ಅನ್ವಯ ದಂಡ ವಸೂಲಾತಿಯೊಂದಿಗೆ ವಾಹನ ಸವಾರರ ಚಾಲನಾ ಪರವಾನಗಿಯನ್ನು ಕನಿಷ್ಠ ಮೂರು ತಿಂಗಳ ಅವಧಿಗೆ ಅಮಾನತ್ತುಗೊಳಿಸಲಾಗುತ್ತದೆ. ಈ ನಿಮಯ ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ತಿಳಿಸಿದೆ.