ಮೈಸೂರು, ಅ. 19: ಇಂದು ಮೈಸೂರು ವಿವಿಗೆ 100ನೇ ವಾರ್ಷಿಕ ಘಟಿಕೋತ್ಸವದ ಸಂಭ್ರಮ. ಭೀತಿ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘಟಿಕೋತ್ಸವದ ಭಾಷಣವನ್ನು ವರ್ಚುವಲ್ ವೇದಿಕೆ ಮೂಲಕ ಮಾಡಿರುವುದು ಇನ್ನೊಂದು ವಿಶೇಷ.
ನಾಡಹಬ್ಬ ಮೈಸೂರು ದಸರಾ ಸಂಭ್ರಮಕ್ಕೆ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ 19ಗೆ ಸಂಬಂಧಿಸಿದ ನಿರ್ಬಂಧಗಳಿರಬಹುದು, ಆದರೂ ಸಂಭ್ರಮದ ಉತ್ಸಾಹಕ್ಕೇನೂ ಕೊರತೆಯಿಲ್ಲ. ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ತೊಂದರೆಯಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಸಂತ್ರಸ್ತರ ಬಗ್ಗೆ ನನಗೆ ಸಹಾನುಭೂತಿ ಇದೆ. ಕೇಂದ್ರ ಹಾಗೂ ರಾಜ್ಯಗಳು ಪರಿಹಾರ ಕಾರ್ಯದ ಪ್ರಯತ್ನದಲ್ಲಿವೆ. ಮುಖತಃ ಭೇಟಿಯಾಗುವ ಆಸೆ ಇತ್ತು, ಕೊರೊನಾ ಕಾರಣ ಅದು ಸಾಧ್ಯವಾಗಲಿಲ್ಲ. ಆದರೆ ವರ್ಚುವಲ್ ರೂಪದಲ್ಲಿ ಎಲ್ಲರೂ ಜತೆಯಾಗುತ್ತಿರುವುದು ನನಗೆ ಸಂತೋಷವಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಮತ್ತು ಸಂಕಲ್ಪಗಳನ್ನು ಸಾಕಾರಗೊಳಿಸಿರುವ ವಿಶ್ವವಿದ್ಯಾಲಯ ಎಂಬ ಹೆಮ್ಮಗೆ ಪಾತ್ರವಾಗುತ್ತದೆ ಮೈಸೂರು ವಿಶ್ವವಿದ್ಯಾಲಯ. 102 ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿವಿಯ ಮೊದಲ ಘಟಿಕೋತ್ಸವ ಭಾಷಣ ಮಾಡಿದ್ದರು. ಅಂದಿನಿಂದ ಇಂದಿನ ತನಕ ರಾಷ್ಟ್ರನಿರ್ಮಾಣಕ್ಕೆ ಕೊಡುಗೆ ನೀಡಿದ ಅನೇಕ ರತ್ನಗಳು ಈ ವಿವಿಯಿಂದ ಹೊರಬಂದಿದ್ದಾರೆ ಎಂದರು.
ಈ ವಿಶ್ವವಿದ್ಯಾಲಯದಲ್ಲಿ ಭಾರತ ರತ್ನ ಡಾ.ಸರ್ವಂಪಲ್ಲಿ ರಾಧಾಕೃಷ್ಣನ್ ಅವರು ಅನೇಕ ವಿದ್ಯಾರ್ಥಿಗಳಿಗೆ ಹೊಸ ಪ್ರೇರಣೆಯನ್ನು ನೀಡಿದ್ದಾರೆ. ಅದೇ ರೀತಿ ಇಂದು ಇಲ್ಲಿ ನೆರೆದಿರುವ ಎಲ್ಲರ ಬಗ್ಗೆಯೂ ನಮಗೆ ವಿಶ್ವಾಸವಿದೆ. ನಿರೀಕ್ಷೆಯೂ ಹೆಚ್ಚಾಗಿದೆ. ಇಂದು ನಿಮ್ಮ ಪದವಿ ಪ್ರಮಾಣದೊಂದಿಗೆ ವಿಶ್ವವಿದ್ಯಾಲಯ, ಇಲ್ಲಿನ ಪ್ರಾಧ್ಯಾಪಕರು ನಿಮ್ಮ ಮೇಲೆ ಸಮಾಜದ ಹೊಣೆಗಾರಿಕೆಯನ್ನೂ ನಿಮ್ಮ ಮೇಲೆ ಹೊರಿಸಿದ್ದಾರೆ.
ಭಾರತವನ್ನು ಉನ್ನತ ಶಿಕ್ಷಣದ ಗ್ಲೋಬಲ್ ಹಬ್ ಮಾಡುವುದಕ್ಕಾಗಿ, ನಮ್ಮ ಯುವಜನರನ್ನು ಸ್ಪರ್ಧಾತ್ಮಕರನ್ನಾಗಿಸುವುದಕ್ಕೆ ಗುಣಾತ್ಮಕ, ಸಂಖ್ಯಾತ್ಮಕ ವೃದ್ಧಿಗೆ ಪ್ರಯತ್ನ ನಡೆದಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ 2014ರ ತನಕ 16 ಐಐಟಿಗಳಷ್ಟೇ ಇದ್ದವು. ಈಗ ಕಳೆದ ಆರು ವರ್ಷಗಳ ಅವಧಿಯಲ್ಲಿ ಅವಶ್ಯವಾಗಿ ಪ್ರತಿವರ್ಷ ಒಂದು ಹೊಸ ಐಐಟಿ ಸ್ಥಾಪನೆಯಾಗಿದೆ. ಇದರಲ್ಲಿ ಕರ್ನಾಟಕದ ಧಾರವಾಡದಲ್ಲೂ ಒಂದು ಸ್ಥಾಪನೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯಪಾಲ ವಾಜುಬಾಯಿ ವಾಲಾ ಮತ್ತು ಉಪಮುಖ್ಯಮಂತ್ರಿ ಸಿ ಎನ್ ಅಶ್ವತ್ ನಾರಾಯಣ್ ಉಪಸ್ಥಿತರಿದ್ದರು.