ರೈತರೇ ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ಈ ರಸ್ತೆಯಲ್ಲಿ ಎತ್ತಿನ ಬಂಡಿಯಲ್ಲಿ ರೈತನು ಹೋದರೆ ಸಾಕು , ಬೆನ್ನಿನ ಎಲುಬು ಮುರಿಯುವುದು ಗ್ಯಾರಂಟಿಯಾಗಿದೆ. ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಗುರುಮಿಠಕಲ್ ಮತಕ್ಷೇತ್ರದ ಕಿಲ್ಲನಕೇರಾ ಗ್ರಾಮದ ಸತ್ಯ ಸಂಗತಿ ಇದಾಗಿದೆ. ಈ ರಸ್ತೆಯಲ್ಲಿ ಎತ್ತಿನ ಬಂಡಿಯಲ್ಲಿ ಹೋದ ಕೆಲ ರೈತರ ಎತ್ತಿನ ಬಂಡಿಯು ಮುರಿದಿವೆ. ಎತ್ತಿನ ಬಂಡಿಯಲ್ಲಿ ಕುಳಿತು ಜಮೀನಿಗೆ ಹೋಗುವಾಗ ಚಿಕ್ಕಮಗುವಿನ ಕೈಮುರಿಯುವಂತಹ ಅನಾಹುತಗಳು ನಡೆದಿದೆ. ಈ ಗ್ರಾಮದಲ್ಲಿ ರೈತನು ಮನೆಯಿಂದ ಜಮೀನಿಗೆ ಎತ್ತಿನ ಬಂಡಿಯನ್ನು ತೆಗೆದುಕೊಂಡು ಹೋಗಬೇಕಾದರೆ , ಜೀವದ ಆಸೆ ಬಿಟ್ಟು , ಹರಸಾಹಸಪಟ್ಟು ಹೋಗಬೇಕಾಗುತ್ತದೆ. ಇಲ್ಲಿ ರೈತನಿಗೆ ಮಾತ್ರವಲ್ಲ , ಎತ್ತುಗಳಿಗೂ ಹಾನಿಯಾಗುವುದರಲ್ಲಿ ಅನುಮಾನವಿಲ್ಲ. ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಇರುವುದರಿಂದ ಅಡ್ಡಾದಿಡ್ಡಿಯಾಗಿ ಬಂಡಿಯನ್ನು ಎಳೆದುಕೊಂಡು ದಡಕ್ಕೆ ಹೋಗುವಷ್ಟರಲ್ಲಿ ಮೂಕಪ್ರಾಣಿಗಳು ನಿಟ್ಟುಸಿರು ಬಿಡುತ್ತಿರುತ್ತವೆ. ಈ ಊರಿನ ರೈತರ ಗೋಳನ್ನು ಹೇಳುವವರು ಕೇಳುವವರು ಯಾರಿಲ್ಲ. ರೈತನ ಗೋಳು ರೈತನೇ ಹೇಳಬೇಕಾಗುತ್ತದೆ. ಆದರೆ ಆತನ ಗೋಳು ಯಾರ ಮುಂದೆ ಹೇಳಬೇಕು .ಎಂಬುದು ಗೊಂದಲಕ್ಕೆ ಸಿಲುಕಿದ ವಿಚಾರವಾಗಿದೆ.
ಇದು ಹತ್ತಿ ಬೆಳೆಯ ಸುಗ್ಗಿಯ ಕಾಲ ಇರುವುದರಿಂದ ಸೂರ್ಯ ಉದಯಕ್ಕೆ ಮುಂಚೆ ಜಮೀನಿಗೆ ಹೋಗಿ ಸೂರ್ಯಾಸ್ತದ ಸಮಯಕ್ಕೆ ಮನೆಗೆ ಬಂದು ತಲುಪುತ್ತಾನೆ. ಇಂತಹ ಸಮಯದಲ್ಲಿ ಆತನ ನೋವು ಯಾರಿಗೆ ಹೇಳಬೇಕು ಎಂದು ಯೋಚಿಸಬೇಕಾಗುತ್ತದೆ. ಕೆಲ ರೈತರಿಗೆ ಸಮಯ ಸಿಕ್ಕಾಗ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಸಮಸ್ಯೆಯನ್ನು ಮುಂದಿಟ್ಟಾಗ , ಅದಕ್ಕೆ ನಮಗೆ ಸಂಬಂಧವಿಲ್ಲವೆಂದು ಅವಾಜ್ ಹಾಕುತ್ತಾರೆ. ಅಧಿಕಾರಿಗಳ ಬೈಗುಳಕ್ಕೆ ಹೆದರಿ ರೈತರು ತೆಪ್ಪಗೆ ಮನೆಗೆ ಬರುವಂತಾಗಿದೆ. ತಾತ್ಕಾಲಿಕವಾಗಿ ಆ ಗುಂಡಿಗಳಿಗೆ ಜಲ್ಲಿ ಕಲ್ಲುಗಳನ್ನು ಹಾಕಿಸಿ ರೈತರಿಗೆ ಅನೂಕೂಲ ಮಾಡಿ ಕೊಡಬೇಕಾಗಿದೆ. ಇಂತಹ ರಸ್ತೆಯಲ್ಲಿ ಅಪಘಾತವಾಗಿ ರೈತರ ಪ್ರಾಣ ಹೋಗುವುದರಲ್ಲಿ ಅನುಮಾನವಿಲ್ಲ…ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿದರೆ ಸಾಕು. ಆದಷ್ಟು ಬೇಗ ಈ ಗುಂಡಿಗಳನ್ನು ಜಲ್ಲಿಕಲ್ಲುಗಳಿಂದ ಮುಚ್ಚಿ . ರೈತರು ನಿರ್ಭಯವಾಗಿ ಎತ್ತಿನ ಗಾಡಿ ಓಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಅನೂಕೂಲ ಮಾಡಿಕೊಡಲಿ ಎಂಬುದು ನಮ್ಮ ಆಶಯ.
- ಶರಬು ಬಿ ನಾಟೇಕಾರ್ ಯಾದಗಿರಿ