ಹೊಸದಿಲ್ಲಿ, ನ. 2: ಕಷ್ಟದ ಸಂದರ್ಭದಲ್ಲಿ ದಾನಿಗಳಿಂದ ಬಂದಿದ್ದ ದೇಣಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಇನ್ಸ್ಟಾಗ್ರಾಮ್ನ ಬ್ಲಾಗರ್ ಗೌರವ್ ವಾಸನ್ ವಿರುದ್ಧ ʻಬಾಬಾ ಕಾ ದಾಬಾʼದ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಂತ ಪ್ರಸಾದ್ (80) ತಮ್ಮ ಪತ್ನಿ ಬಾದಾಮಿ ದೇವಿ ಅವರೊಂದಿಗೆ ದೆಹಲಿಯ ಮಾಲ್ವಿಯಾ ನಗರದಲ್ಲಿ ʻಬಾಬಾ ಕಾ ದಾಬಾʼ ಉಪಾಹಾರ ಹೋಟೆಲ್ ನಡೆಸಿಕೊಂಡಿದ್ದಾರೆ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಅವರ ವ್ಯಾಪಾರಕ್ಕೆ ಪೆಟ್ಟುಬಿದ್ದತ್ತು. ಇವರ ಆರ್ಥಿಕ ಸಂಕಷ್ಟದ ಕುರಿತು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದು ವೈರಲ್ ಆಗಿ ʻಬಾಬಾ ಕಾ ದಾಬಾʼದ ಮಾಲೀಕ ಕಾಂತ ಪ್ರಸಾದ್ ಅವರನ್ನು ಮತ್ತಷ್ಟು ಜನಪ್ರಿಯಗೊಳಿಸಿತು. ಸಾಮಾನ್ಯ ಜನರಿಂದ ಹಿಡಿದು ಸೆಲಬ್ರಿಟಿಗಳವರೆಗೂ ಈ ಅಂಗಡಿಯನ್ನು ಹುಡುಕೊಂಡು ಬರಲು ಶುರು ಮಾಡಿದ್ದರು.
ಬ್ಲಾಗರ್ ಗೌರವ್ ವಾಸನ್ ಅವರು ʻಬಾಬಾ ಕಾ ದಾಬಾʼ ಮಾಲೀಕನನ್ನು ಮಾತನಾಡಿಸಿ ವೃದ್ಧ ದಂಪತಿಯ ಕಷ್ಟದ ಜೀವನದ ಕುರಿತು ವಿಡಿಯೊವೊಂದನ್ನು ಚಿತ್ರೀಕರಿಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ʻಸ್ನೇಹಿತರೆ, ನಾನು ಮಾಳವಿಯಾ ನಗರಕ್ಕೆ ಹೋಗಿದ್ದೆ. ಈ ವಯಸ್ಸಾದ ದಂಪತಿಗಳು ಜೀವನೋಪಾಯಕ್ಕಾಗಿ ಶ್ರಮಿಸುತ್ತಿರುವುದನ್ನು ಗಮನಿಸಿದೆ. ನಾನು ಅಲ್ಲಿಗೆ ಹೋದಾಗ ಅವರು ಕಷ್ಟಪಡುತ್ತಿರುವುದನ್ನು ನೋಡಿದೆ. ಆಗ ನನಗೆ ಅಳು ಬಂತು. ಅದನ್ನು ನನ್ನಿಂದ ತಡೆಯಲು ಸಾಧ್ಯವಾಗಲಿಲ್ಲ. ಅವರು ಬೆಳಿಗ್ಗೆ 6.30ಕ್ಕೆ ತಮ್ಮ ಕೆಲಸ ಪ್ರಾರಂಭಿಸಿದ್ದಾರೆ. ಆದರೆ, ಮಧ್ಯಾಹ್ನ 1.30 ಗಂಟೆಯಾದರೂ ಕೇವಲ 60 ಸಂಪಾದಿಸಲು ಅವರಿಂದ ಸಾಧ್ಯವಾಗಿತ್ತು’ ಎಂದು ವಾಸನ್ ಬರೆದುಕೊಂಡಿದ್ದರು.
ಇದಾದ ಬಳಿಕ ಈಗ ವಾಸನ್ ವಿರುದ್ಧ ʻಬಾಬಾ ಕಾ ದಾಬಾʼದ ಪ್ರಸಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ʻನನ್ನ ಕಷ್ಟದ ಜೀವನದ ಬಗ್ಗೆ ವಾಸನ್ ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದರು. ಅದರಲ್ಲಿ ನನಗೆ ನೆರವು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ನೆರವಿಗೆ ಸಂಬಂಧಿಸಿದಂತೆ ವಾಸನ್ ತನ್ನ ಮತ್ತು ತನ್ನ ಕುಟುಂಬಸ್ಥರು, ಸ್ನೇಹಿತರ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ನಂಬರ್ ಅನ್ನು ಮಾತ್ರ ಹಂಚಿಕೊಂಡಿದ್ದಾರೆ. ಆ ಮೂಲಕ ಅಪಾರ ಪ್ರಮಾಣದ ದೇಣಿಗೆ ಹಣವನ್ನು ಸಂಗ್ರಹಿಸಿ ವಂಚಿಸಿದ್ದಾರೆʼ ಎಂದು ದೂರಿನಲ್ಲಿ ತಿಳಿಸಿದ್ದಾರೆ.ʻ
ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸ್ವೀಕರಿಸಿದ್ದೇವೆ. ಇನ್ನೂ ಎಫ್ಐಆರ್ ದಾಖಲಿಸಿಲ್ಲʼ ಎಂದು ಪೊಲೀಸ್ ಅಧಿಕಾರಿ ಅಟಲ್ ಕುಮಾರ್ ಟಾಕೂರ್ ತಿಳಿಸಿದ್ದಾರೆ.