ರಸ್ತೆಯಲ್ಲ ಕೆಸರು ಗದ್ದೆ

ರಸ್ತೆಯಲ್ಲ ಇದು ಕೆಸರು ಗದ್ದೆ |ಸಿಟಿಜನ್ ಜರ್ನಲಿಸ್ಟ್  | ವಿಜಯ  ಟೈಮ್ಸ್

ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಜನರ ರಸ್ತೆ ಸಮಸ್ಯೆಯನ್ನ ಸುಂಕನೂರು ಗ್ರಾಮದ ಸಿಟಿಜನ್‌ ಜರ್ನಲಿಸ್ಟ್‌ ಮಾಲತೇಶ್‌ ಅವರು ವರದಿ ಮಾಡಿದ್ದಾರೆ. ಮಸ್ಕಿ ಮಂದಿ ರಸ್ತೆ ಸಮಸ್ಯೆಯಿಂದ ಯಾವ ರೀತಿ ತೊಂದರೆ ಅನುಭವಿಸುತ್ತಿದ್ದಾರೆ ಹಾಗೂ ನಮ್ಮ ದಪ್ಪ ಚರ್ಮದ ಅಧಿಕಾರಿಗಳು ಯಾಕೆ ಜನರ ನೋವಿಗೆ ಸ್ಪಂದಿಸುತ್ತಿಲ್ಲ ಅನ್ನೋದನ್ನ ಪ್ರಶ್ನಿಸಿದ್ದಾರೆ.

ಸುಂಕನೂರು ಗ್ರಾಮದ ಜನರ ಓಡಾಡೋ ರಸ್ತೆಗಳೆಲ್ಲಾ ಕೆಸರು ಗದ್ದೆಯಂತಾಗಿದೆ. ಸುಮಾರು 70 ವರ್ಷಗಳಿಂದ ಹತ್ತಾರು ಕುಟುಂಬಗಳು ವಾಸಿಸುತ್ತಿವೆ. ಆದ್ರೆ ಇಲ್ಲಿನ ಸಾರ್ವಜನಿಕರಿಗೆ ರಸ್ತೆ ಸೌಲಭ್ಯವಿಲ್ಲದೆ ನಡೆದಾಡಲು ತುಂಬಾ ಕಷ್ಟಕರವಾಗಿದೆ. ವಾಹನಗಳು ಇಲ್ಲಿಗೆ ಬರೋದೇ ದುಸ್ಥರವಾಗಿದೆ.

ಸಂಪೂರ್ಣ ಹದಗೆಟ್ಟು ಹೋಗಿರುವ ರಸ್ತೆಯಲ್ಲಿ ವಾಹನ ಬಿಡಿ, ಜನ ಓಡಾಡೋದೇ ಕಷ್ಟಕರವಾಗಿದೆ. ಹೆಂಗಸರು, ಮಕ್ಕಳು, ವೃದ್ದರು, ಗರ್ಬಿಣಿಯರ ತುರ್ತು ಚಿಕಿತ್ಸೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ರೋಗಿಗಳ ಪರಿಸ್ಥಿತಿ ಹದಗೆಟ್ರೆ ಆಂಬುಲೆನ್ಸ್‌ಗಳು ಕೂಡ ಇಲ್ಲಿಗೆ ಬರೋದೇ ಇಲ್ಲ. ಮಳೆ ಜೋರಾಗಿ ಬಂದು ನೀರು ತುಂಬಿದರೆ ಕೆಸರಲ್ಲಿ ಹೂತು ಹೋಗುವ ಸಂಭವವಿದೆ. ಇನ್ನು ಸುಂಕನೂರು ಗ್ರಾಮದ ಜನರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಬಳಲುತ್ತಿದ್ದಾರೆ.

ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಊರಿನ ಹಿತ್ತಲಲ್ಲೇ ಹರಿಯುತ್ತಿರುವ ಕಾಲುವೆ ನೀರನ್ನೇ ಇವರು ಬಳಸಬೇಕಾಗಿದೆ. ಇದರಿಂದ ಜನ ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.ಈ ವಿಷಯದ ಬಗ್ಗೆ ಗ್ರಾಮಸ್ಥರು ಇಲ್ಲಿನ ತಹಶೀಲ್ಧಾರ್ ತಾಲೂಕು ಪಂಚಾಯತ್ ಅಧ್ಯಕ್ಷರು, ಪಿಡಿಒ ಮುಂತಾದ ಎಲ್ಲಾ ವರ್ಗದ ಅಧಿಕಾರಿಗಳಿಗೆ ಈ ಸಮಸ್ಯೆ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಇದುವರೆಗೂ ಯಾರಿಂದಲೂ ಯಾವ ಸ್ಪಂದನೆಯೂ ಸಿಗಲಿಲ್ಲ.

ಸುಂಕನೂರು ಗ್ರಾಮದ ಹಳ್ಳಿಯ ಬಡ ಜನರ ಸಮಸ್ಯೆಯನ್ನು, ಇಲ್ಲಿನ ಅಧಿಕಾರಿಗಳು ಆದಷ್ಟು ಬೇಗ ಪರಿಶೀಲಿಸಿ, ಈ ಭಾಗದ ಜನರ ಕಷ್ಟಗಳನ್ನು ಆಲಿಸಿ, ಇಲ್ಲಿನ ಜನರಿಗೆ ಸೂಕ್ತ ರಸ್ತೆ ಹಾಗೂ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಮಾಡಿ ಕೊಡಬೇಕಾಗಿದೆ. ಜೊತೆಗೆ ಇಲ್ಲಿನ ಜನರನ್ನು ಬಹುಕಾಲದಿಂದ ಕಾಡುತ್ತಿರುವ ನೀರಿನ ಸಮಸ್ಯೆಯನ್ನೂ ಪರಿಹರಿಸಿ ಜನರ ಕಷ್ಟಗಳಿಗೆ ಮುಕ್ತಿ ಸಿಗಲಿ ಅನ್ನೋದೇ ವಿಜಯಟೈಮ್ಸ್ ನ ಆಶಯ.

Exit mobile version