ಪ್ರವಾಹ ಅಂದ್ರೆ ಉತ್ತರಕರ್ನಾಟಕ ಮಂದಿ ಬೆಚ್ಚಿ ಬೀಳ್ತಾರೆ. ಯಾಕಂದ್ರೆ ಪ್ರತಿವರ್ಷ ಬರೋ ಪ್ರವಾಹ ಇಲ್ಲಿನ ಜನರ ಬದುಕನ್ನೇ ಕೊಚ್ಚಿಕೊಂಡು ಹೋಗುತ್ತೆ. ಈ ಬಾರಿಯೂ ಮಲಪ್ರಭೆ ಉಕ್ಕಿ ಹರಿದಾಗ ಸಾವಿರಾರು ಎಕರೆ ಬೆಳೆ ನಾಶ ಆಯಿತು. ಬೆಳೆಯನ್ನೇ ನಂಬಿದ ರೈತ ಕಣ್ಣೀರಲ್ಲಿ ಕೈತೊಳೆಯುವಂತಾಯಿದೆ. ಅದ್ರಲ್ಲೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಗೋನಾಳ ಹಾಗೂ ಚೋಳಚಗುಡ್ಡ ಗ್ರಾಮದ ಜನರ ಗೋಳು ಹೇಳ ತೀರದು.
ಈ ಗ್ರಾಮಗಳು ಮಲಪ್ರಭೆಯ ದಂಡೆಯಲ್ಲೇ ಇರೋದ್ರಿಂದ ಪ್ರವಾಹ ಬಂದಾಗ ಭೋರ್ಗರವ ಮಲಪ್ರಭೆ ಇವರು ಬೆಳೆದ ಬೆಳಯನ್ನೆಲ್ಲಾ ಕೊಚ್ಚಿಕೊಂಡು ಹೋಗ್ತಾಳೆ. ಇಲ್ಲಿನ ಜಿಲ್ಲಾಡಳಿತ ಇಲ್ಲಿ ಶಾಶ್ವತವಾದ ಒಡ್ಡು ನಿರ್ಮಾಣ ಮಾಡದ ಕಾರಣ ಇಲ್ಲಿ ಈ ರೀತಿಯ ಅನಾಹುತಗಳು ಸಂಭವಿಸುತ್ತಿದೆ. ಇದರಿಂದಾಗಿ ಪ್ರತಿ ವರ್ಷ ತಮಗೆ ಹೊಂಡ ಮುಚ್ಚಲು ನಾಲ್ಕರಿಂದ ಐದು ಲಕ್ಷ ಖರ್ಚಾಗುತ್ತಿದೆ ಅಂತಾರೆ ರೈತರು. ಈ ಭಾಗದ ರೈತರು ನಿರಂತರವಾಗಿ ಈ ಬಗ್ಗೆ ದೂರು ಕೊಟ್ರೂ ಯಾವ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲೀ ಸ್ಪಂದಿಸುತ್ತಿಲ್ಲ ಅನ್ನೋದು ಇವರ ನೋವು. ಇವು ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯ ಅವರ ವಿಧಾನ ಸಭಾಕ್ಷೇತ್ರ ಬಾದಾಮಿಗೆ ಸೇರಿದ ಗ್ರಾಮಗಳಾಗಿವೆ, ಆದ್ರೂ ಅಧಿಕಾರಿಗಳು ಜನರ ನೋವಿಗೆ ಕಿವಿಯೇ ಕೊಡುತ್ತಿಲ್ಲ.
ಅಲ್ಲಿನ ಜನರ ನೋವನ್ನ ಸಿಟಿಜನ್ ಜರ್ನಲಿಸ್ಟ್ ಆಗಿ ರಾಜೇಶ್ ಎಸ್ ದೇಸಾಯಿ ವರದಿ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲಾಡಳಿತದ ನೆರವಿಗೆ ಕೋರಿದ್ದಾರೆ.