ಹೋಂ ಕ್ವಾರಂಟೈನ್ ಧಿಕ್ಕರಿಸಿದವನ ಮೇಲೆ ಪ್ರಕರಣ ದಾಖಲು

ವಿದೇಶದಿಂದ ಬಂದ ವ್ಯಕ್ತಿಯೊಬ್ಬರನ್ನು ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಿದ್ರೂ, ಆ ವ್ಯಕ್ತಿ ಮನೆಯಲ್ಲೇ ಇರದೆ, ಸುತ್ತಾಡುತ್ತಿದ್ದ ಘಟನೆ ಸವಣೂರು ಗ್ರಾ.ಪಂ. ವ್ಯಾಪ್ತಿಯ ಆರೇಲ್ತಡಿಯಲದಲ್ಲಿ ನಡೆದಿದೆ. ಇದೀಗ ಆ ವ್ಯಕ್ತಿಯ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವ್ಯಕ್ತಿ ಕೆಲದಿನಗಳ ಹಿಂದೆ ವಿದೇಶದಿಂದ ಆಗಮಿಸಿದ್ದು, 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವಂತೆ ಅವರಿಗೆ ಸೂಚಿಸಲಾಗಿತ್ತು, ಅಲ್ಲದೆ ಜಿಲ್ಲಾಡಳಿತ ಕೂಡ ಪಟ್ಟಿ ಬಿಡುಗಡೆ ಮಾಡಿತ್ತು. ಅದರಂತೆ ಮಾ.30ರಂದು ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾ.ಪಂ ನ ತಂಡ ಭೇಟಿ ನೀಡಿದ ವೇಳೆ ಆ ವ್ಯಕ್ತಿ ಮನೆಯಲ್ಲಿ ಇರದೇ ಇರುವುದು ಗೊತ್ತಾಗಿದೆ. ಈ ಕುರಿತು ಮನೆಯವರಲ್ಲಿ ವಿಚಾರಿಸಿದಾಗ ಹೊರ ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದು, ಬಳಿಕ ಆ ವ್ಯಕ್ತಿಯನ್ನು ಮನೆಗೆ ಬರುವಂತೆ ಸೂಚಿಸಲಾಗಿದೆ. ಬಳಿಕ ಆ ವ್ಯಕ್ತಿಗೆ ಮನೆಯಲ್ಲಿರುವಂತೆ ತಿಳಿಸಲಾಯಿತು. ಈ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿದ ವ್ಯಕ್ತಿ ಉಡಾಫೆ ವರ್ತನೆ ತೋರಿಸಿದ್ದರೆನ್ನಲಾಗಿದೆ. ಈ ಕಾರಣದಿಂದ ಸರ್ಕಾರದ ಸೂಚನೆ ಧಿಕ್ಕರಿಸಿದಕ್ಕಾಗಿ ಆತನ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version