Bengaluru: ರಾಜ್ಯದಲ್ಲಿ ಬರ ಪರಿಸ್ಥಿತಿ ತಾಂಡವವಾಡುತ್ತಿದ್ದು, ಬರ ಪರಿಹಾರ (Drought Relief) ಸೇರಿದಂತೆ ಅನೇಕ ಇಲಾಖೆಗಳಿಗೆ ಸೂಕ್ತ ಅನುದಾನ ಕೊಡಲು ಹೆಣಗಾಡುತ್ತಿರುವ ರಾಜ್ಯ
ಕಾಂಗ್ರೆಸ್ (Congress) ಸರ್ಕಾರ, ಇದೀಗ ಮುಂಬರುವ ಜನವರಿಯಲ್ಲಿ ದಾವೋಸ್ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah)
ಪ್ರವಾಸಕ್ಕಾಗಿ ಬರೋಬ್ಬರಿ 12 ಕೋಟಿ ರೂಪಾಯಿ ವೆಚ್ಚ ಮಾಡಲು ನಿರ್ಧರಿಸಿದೆ.
ದಾವೋಸ್ನಲ್ಲಿ (Davos) ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯದ ನಿಯೋಗ ಭೇಟಿ ನೀಡಲಿದ್ದು, ಇದೊಂದು ದುಬಾರಿ ಪ್ರವಾಸವಾಗಿ ಮಾರ್ಪಟ್ಟಿದೆ.
ರಾಜ್ಯದ ನಿಯೋಗಕ್ಕೆ ಐಷಾರಾಮಿ ಹೊಟೇಲ್ (Hotel), ದುಬಾರಿ ಕಾರುಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇದಕ್ಕಾಗಿ 12 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಬೆಳಗಾವಿಯಲ್ಲಿ (Belgaum) ನಡೆಯುತ್ತಿರುವ ಅಧಿವೇಶನದಲ್ಲಿ ಸಿದ್ದರಾಮಯ್ಯನವರು 3542 ಕೋಟಿ ರೂ.ಗಳ ಪೂರಕ ಬಜೆಟ್ ಮಂಡಿಸಿದ್ದು, ವಿಧಾನ ಸಭಾಧ್ಯಕ್ಷರ ಹೊಸ ಕಾರು ಖರೀದಿಗೆ 39 ಲಕ್ಷ,
ಉಪಸಭಾಪತಿಗೆ ಕಾರು ಖರೀದಿಗೆ 8 ಲಕ್ಷ ಹೆಚ್ಚುವರಿ ಅನುದಾನ, ಕ್ಯಾಬಿನೆಟ್ (Cabinet) ಸಚಿವರ ಬಳಕೆಗೆ 2.71 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಕಾರುಗಳು, ಶಾಸಕರ ಕಾರು ಖರೀದಿಗೆ 4 ಕೋಟಿ ರೂಪಾಯಿ,
ನವದೆಹಲಿಗೆ (New Delhi) ರಾಜ್ಯದ ಸಚಿವರು ಮತ್ತು ಮುಖ್ಯಮಂತ್ರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಬಳಸಲು 38 ದುಬಾರಿ ಕಾರು ಖರೀದಿಗೆ 7.44 ಕೋಟಿ ರೂಪಾತಿ, ಕರ್ನಾಟಕ (Karnataka)
ಭವನದ ಬಳಕೆಗಾಗಿ ಕಾರು ಖರೀದಿಗೆ 1.15 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾಪ ಮಾಡಿದ್ದಾರೆ.
ಅದೇ ರೀತಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ನೇತೃತ್ವದ ನಿಯೋಗದ ಅಮೆರಿಕ (America) ಭೇಟಿಗೆ 2.25 ಕೋಟಿ ರೂಪಾಯಿ, ಮುಖ್ಯ ಚುನಾವಣಾ ಕಚೇರಿಗೆ 30 ಕೋಟಿ ರೂಪಾಯಿ,
ಇನ್ವೆಸ್ಟ್ ಕರ್ನಾಟಕ ಫೋರಂ ಸಂಸ್ಥೆಗೆ ಕಾರು ಖರೀದಿಗೆ 20 ಲಕ್ಷ, ರಾಜ್ಯದ ಅಡ್ವೊಕೇಟ್ ಜನರಲ್ (Advocate General) ಅವರ ಕಚೇರಿಯ ಆಧುನೀಕರಣಕ್ಕೆ 4.50 ಕೋಟಿ, ವಕೀಲರ ಸಮ್ಮೇಳನಕ್ಕೆ
50 ಲಕ್ಷ, ರಾಜ್ಯ ಹಜ್ ಸಮಿತಿಯ ಆಡಳಿತಾತ್ಮಕ ವೆಚ್ಚಕ್ಕೆ 5 ಕೋಟಿ, ದಸರಾ ಸಿಎಂ ಕಪ್ ಕ್ರೀಡಾಕೂಟಕ್ಕೆ 4.85 ಕೋಟಿ, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 4.66 ಕೋಟಿ ಸೇರಿದಂತೆ
ಇತರೆ ವೆಚ್ಚಗಳ ಬಗ್ಗೆ ಉಲ್ಲೇಖಿಸಲಾಗಿದೆ.