New Delhi: ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ (NDA) ಸರ್ಕಾರದ ಇಪ್ಪತ್ತೆಂಟು ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ನೀಡಿದೆ. ಮೂರನೇ ಬಾರಿಗೆ ಅಧಿಕಾರ ಪಡೆದು ರಚಿಸಿರುವ ನೂತನ ಸಂಪುಟದ 28 ಸಚಿವರ ವಿರುದ್ಧ ಕ್ರಿಮಿನಲ್ (Criminal) ಪ್ರಕರಣ ಇದ್ದು, ಆ ಪೈಕಿ 19 ಸಚಿವರು ಕೊಲೆ ಯತ್ನ, ಮಹಿಳೆಯರ ವಿರುದ್ಧದ ಅಪರಾಧಗಳು ಮತ್ತು ದ್ವೇಷ ಭಾಷಣದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಎಡಿಆರ್ ಶಾಕಿಂಗ್ (ADR Shocking) ಮಾಹಿತಿ ಬಿಚ್ಚಿಟ್ಟಿದೆ.
ಅದರೊಂದಿಗೆ ಅತ್ಯಂತ ಗಂಭೀರವಾದ ಆರೋಪ ಪ್ರಕರಣ ಎದುರಿಸುತ್ತಿರುವ ಸಚಿವರ ಪೈಕಿ ಇಬ್ಬರು ಭಾರತೀಯ ದಂಡ ಸಂಹಿತೆ ಸೆಕ್ಷನ್ (Section) 307 ರ ಅಡಿಯಲ್ಲಿ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ತಿಳಿದುಬಂದಿದೆ. ಬಂದರು, ಹಡಗು ಮತ್ತು ಜಲಮಾರ್ಗಗಳ ಖಾತೆ ರಾಜ್ಯ ಸಚಿವ ಶಾಂತನು ಠಾಕೂರ್ ಮತ್ತು ಶಿಕ್ಷಣ ಮತ್ತು ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸುಕಾಂತ ಮಜುಂದಾರ್ ಅವರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಆದರೆ ಇದು ಈಗಿನವುಗಳಲ್ಲ ಬಹಳ ಹಳೆಯದು ಎಂದು ಎಡಿಆರ್ ಹೇಳಿದೆ.
ಅಲ್ಲದೆ ಐವರು ಸಚಿವರು, ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ (Bandi Sanjay Kumar), ಠಾಕೂರ್, ಮಜುಂದಾರ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಸುರೇಶ್ ಗೋಪಿ (Suresh Gopi) ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಜುಯಲ್ ಓರಂ ವಿರುದ್ಧ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ಎಡಿಆರ್ ತನ್ನ ವರದಿಯಲ್ಲಿ ತಿಳಿಸಿದೆ.
ಇನ್ನು ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಎಂಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಒಟ್ಟು 71 ಸಚಿವರಲ್ಲಿ 28 ಸಚಿವರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವವರೆ ಆಗಿದ್ದಾರೆ ಎಂದು ಎಡಿಆರ್ ಘೋಷಿಸಿದೆ.