ಮೀನುಗಾರಿಕೆಗೆ ತೆರಳಿದ್ದ ೯ ಮಂದಿ ಸಾವು: ದೋಣಿ ಮಗುಚಿ ದುರಂತ

ಪಶ್ಚಿಮ ಬಂಗಾಳ, ಜು. 15: ಬಂಗಾಳ ಕೊಲ್ಲಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಟ್ರಾಲರ್ ದೋಣಿಯೊಂದು ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ 9 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಪಾರಾಗಿದ್ದು, ನಾಪತ್ತೆಯಾಗಿರುವ ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆದಿದೆ.

ಪಶ್ಚಿಮ ಬಂಗಾಳದ ಮೀನುಗಾರರು ಐದು ದಿನಗಳ ಹಿಂದೆ ಮೀನು ಹಿಡಿಯಲು ಸಮುದ್ರಕ್ಕೆ ತೆರಳಿದ್ದರು. ಮೀನು ಹಿಡಿದು ಬುಧವಾರ ದಡಕ್ಕೆ ವಾಪಸ್‌ ಬರುತ್ತಿದ್ದಾಗ ಬಕ್ಕಹಾಲಿ ಕರಾವಳಿ ತೀರದಲ್ಲಿರುವ ರಕ್ತೇಶ್ವರಿ ದ್ವೀಪದ ಸಮೀಪ ದೋಣಿ ಭಾರಿ ಅಲೆಗಳಿಗೆ ಸಿಲುಕಿ ಮುಗುಚಿ ಬಿದ್ದಿತ್ತು. ದೋಣಿ ನಡೆಸುತ್ತಿದ್ದ ಮೀನುಗಾರ ಸಂಕರ್ ಸಸ್ಮಾಲ್ ಮೈಹಿ ಮತ್ತು ಸೈಕಾತ್ ದಾಸ್‌ ಅವರು ಸಮುದ್ರಕ್ಕೆ ಹಾರಿದ್ದರು. ಅವರನ್ನು ಇನ್ನೊಂದು ದೋಣಿಯಲ್ಲಿದ್ದವರು ರಕ್ಷಿಸಿದ್ದರು.

ಕಡಲಲ್ಲಿ ಮುಳುಗಿದ ದೋಣಿಗಾಗಿ ಶೋಧ ನಡೆಸಲಾಗಿತ್ತು. ಗುರುವಾರ ಅದು ಪತ್ತೆಯಾಗಿದ್ದು, ದೋಣಿಯ ಕ್ಯಾಬಿನ್‌ನಲ್ಲಿ ಮೀನು ರಾಶಿಯ ಜತೆಯಲ್ಲಿ 9 ಮಂದಿಯ ಶವ ಪತ್ತೆಯಾಯಿತು. ಅಪಘಾತ ಸಂಭವಿಸುವ ವೇಳೆ ಇವರು ನಿದ್ದೆ ಮಾಡುತ್ತಿದ್ದಿರಬೇಕು, ಹೀಗಾಗಿ ದೋಣಿಯಿಂದ ಹೊರಬರುವುದು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ.

Exit mobile version