ಬೆಂಗಳೂರು, ಜ. 22: ತಮಿಳುನಾಡಿನ ಕ್ರಷ್ಣ ಗಿರಿಯಲ್ಲಿರೋ ಮುತ್ತೂಟ್ ಫೈನಾನ್ಸ್ಗೆ ನುಗ್ಗಿದ 6 ಮಂದಿಯ ದರೋಡೆಕೋರರ ತಂಡ ಹಾಡಹಗಲೇ ಸಿನೆಮಾ ಸ್ಟೈಲಲ್ಲಿ ಗನ್ ತೋರಿಸಿ ಸುಮಾರು 7. 5 ಕೋಟಿ ಮೌಲ್ಯದ ಚಿನ್ನ ಹಾಗೂ ನಗದನ್ನು ದರೋಡೆ ಮಾಡಿರುವ ಘಟನೆ ಇಂದು ನಡೆದಿದೆ.
ಬೆಳಿಗ್ಗೆ ಸುಮಾರು ೯.೩೦ ಗಂಟೆಯ ವೇಳೆಗೆ ಮುತ್ತೂಟ್ ಫೈನಾನ್ಸ್ಗೆ ನುಗ್ಗಿದ ಮುಸುಕುದಾರ ದರೋಡೆಕೋರರು ಫೈನಾನ್ಸ್ ಮ್ಯಾನೇಜರ್ಗೆ ಗನ್ ತೋರಿಸಿ 2೧ ಕೆ ಜಿ ಚಿನ್ನವನ್ನು ಮತ್ತು ಒಂದು ಲಕ್ಷ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ದರೋಡೆಕೋರರು ಹಿಂದಿ ಮತ್ತು ಆಂಗ್ಲಬಾಷೆಯಲ್ಲಿ ಮಾತಾಡುತ್ತಿದ್ದರು. ಘಟನೆಯ ಸಂದರ್ಭದಲ್ಲಿ ೭ ಮಂದಿ ಸಿಬ್ಬಂದಿ ಹಾಗೂ ೩ ಮಂದಿ ಗ್ರಾಹಕರು ಸಂಸ್ಥೆಯಲ್ಲಿದ್ದರು ಎಂದು ಸಂಸ್ಥೆಯ ಉದ್ಯೋಗಿಗಳು ಹೇಳಿದ್ದಾರೆ.
ಮುತ್ತೂಟ್ ಫೈನಾನ್ಸ್ನೊಳಗೆ ನುಗ್ಗಿದ ಆರು ಮಂದಿ ಮುಸುಕುದಾರಿಗಳು ಮೊದಲು ಮ್ಯಾನೇಜರ್ ಕೋಣೆಗೆ ನುಗ್ಗಿ ಅವರ ತಲೆಗೆ ಗನ್ ಹಿಡಿದು, ಉಳಿದ ಸಿಬ್ಬಂದಿಯನ್ನು ಕುರ್ಚಿಯಲ್ಲಿ ಕೂರಿಸಿ , ಕೈಗಳಿಗೆ ಟೇಪ್ ಸುತ್ತಿ ಚಿನ್ನ ಹಾಗೂ ನಗದು ದೋಚಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸಿದರು. ಜೊತೆಗೆ ಪೊಲೀಸ್ ನಾಯಿಗಳನ್ನೂ ಕೂಡ ತನಿಖೆಗೆ ನಿಯೋಜಿಸಲಾಗಿದೆ. ದರೋಡೆಕೋರರ ಬೆರಳಚ್ಚನ್ನು ಬೆರಳಚ್ಚು ತಜ್ಞರಿಗೆ ಕಳಿಸಲಾಗುವುದೆಂದು ಪೊಲೀಸರು ಹೇಳಿದ್ದಾರೆ. ದರೋಡೆಕೋರರ ಪತ್ತೆಗಾಗಿ ಪೊಲೀಸರು ವಿಶೇಷವಾದ ತಂಡವನ್ನು ರಚನೆ ಮಾಡಿದ್ದಾರೆ . ದರೋಡೆಕೋರರ ತಂಡವು ಬೆಂಗಳೂರಿನತ್ತ ತೆರಳಿರುವ ಶಂಕೆ ವ್ಯಕ್ತವಾಗಿದ್ದು ಕರ್ನಾಟಕ ಪೊಲೀಸರು ಕೂಡ ತನಿಖೆಯನ್ನು ಆರಂಬಿಸಿದ್ದಾರೆಂದು ತಿಳಿಸಿದ್ದಾರೆ.