ಚಾಮರಾಜನಗರ, ಮಾ. 12: ಜಿಂಕೆ ಕೊಂದು ಮಾಂಸ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕಾವೇರಿ ವನ್ಯಧಾಮದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಹನೂರು ತಾಲ್ಲೂಕಿನ ಭದ್ರಯ್ಯನಹಳ್ಳಿ ಗ್ರಾಮದ ನಾಗರಾಜು (33) ಬಂಧಿತ ಆರೋಪಿ. ಆರೋಪಿಯಿಂದ ಅಂದಾಜು 30 ಕೆಜಿ ಜಿಂಕೆ ಮಾಂಸ, ಚೂರಿ, ಕುಡುಗೋಲು ಮತ್ತು ಜಿಂಕೆ ಚರ್ಮವನ್ನು ವಶಕ್ಕೆ ಪಡೆದು ಮೊಕದ್ದಮೆಯನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೌದಳ್ಳಿ ಶಾಖೆಯ ಚನ್ನೂರು ಗಸ್ತಿನ ಸಿಪಿಟಿ 42ರ ವಿಠಲಯ್ಯನ ಬಂಡೆ ಅರಣ್ಯಪ್ರದೇಶದ ಗಡಿ ರೇಖೆಯ ಪಕ್ಕದಲ್ಲಿರುವ ವೀರ ಬಸವೇಗೌಡ ಎಂಬವರ ಖಾಸಗಿ ಜಮೀನಿನ ಸರ್ವೇ ನಂಬರ್ 141ರ ಪಟ್ಟ ಜಮೀನಿನಲ್ಲಿ ಜಿಂಕೆಯನ್ನು ಕೊಂದು ಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾವೇರಿ ವನ್ಯಧಾಮದ ಉಪಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು.