ಕೋಲ್ಕತ್ತಾ, ಜೂ. 10: ಈ ವರ್ಷ ಹೈವೋಲ್ಟೇಜ್ ಚುನಾವಣೆಯಾಗಿದ್ದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಸತತ ಮೂರನೇ ಬಾರಿಗೆ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಟಿಎಂಸಿ ನಾಯಕಿ, ತಮ್ಮ ಗುರಿ ಈಗ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಅಸ್ಥಿರಗೊಳಿಸುವುದು ಎಂದು ಹೇಳಿದ್ದಾರೆ.
ಕೇಂದ್ರದ ತಿದ್ದುಪಡಿ ರೈತ ಮಸೂದೆಯನ್ನು ಎಲ್ಲಾ ವಿರೋಧ ಪಕ್ಷಗಳೂ ಒಗ್ಗಟ್ಟಿನಿಂದ ವಿರೋಧಿಸಬೇಕು ಎಂದು ಕರೆ ನೀಡಿದ ಮಮತಾ ಬ್ಯಾನರ್ಜಿ, ರೈತರ ಪ್ರತಿಭಟನೆಗೆ ರೈತ ಮುಖಂಡ ಟಿಕಾಯತ್ ಅವರಿಗೆ ಬೆಂಬಲ ನೀಡಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ಯಾವತ್ತಿಗೂ ರೈತರ ಪರವಾಗಿ ಇರುತ್ತದೆ ಎಂದು ಹೇಳಿದೆ.
ರೈತರ ಚಳವಳಿ, ಪ್ರತಿಭಟನೆ ಕೇವಲ ಪಂಜಾಬ್, ಹರ್ಯಾಣ ಅಥವಾ ಉತ್ತರ ಪ್ರದೇಶಕ್ಕೆ ಸೀಮಿತವಾಗಿಲ್ಲ. ಇದು ಇಡೀ ದೇಶಕ್ಕೆ ಸಂಬಂಧಿಸಿದ್ದಾಗಿದೆ. ಇಂದಿನಿಂದ ನನ್ನ ಗುರಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಅಸ್ಥಿರಗೊಳಿಸುವುದು. ಕೇಂದ್ರ ಸರ್ಕಾರದ ನೀತಿ ನಿರೂಪಣೆಗಳ ಬಗ್ಗೆ ರಾಜ್ಯಗಳು ಮಾತನಾಡಬೇಕು, ಕೇಂದ್ರದ ನೀತಿಗಳ ಬಗ್ಗೆ ಸವಿಸ್ತಾರವಾಗಿ ರಾಜ್ಯಗಳು ಮಾತನಾಡಲು ಒಂದು ವೇದಿಕೆ ಕಲ್ಪಿಸಬೇಕು. ಆಗುತ್ತಿರುವ ಅನ್ಯಾಯ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಧ್ವನಿಯೆತ್ತಬೇಕು ಎಂದು ಟಿಕಾಯತ್ ಜೊತೆಗೆ ಸಭೆ ನಡೆಸಿದ ಬಳಿಕ ಹೇಳಿದ್ದಾರೆ.
ಹಿಂದಿನಿಂದಲೂ ಮಮತಾ ಬ್ಯಾನರ್ಜಿ ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಹಲವು ಟಿಎಂಸಿ ಸಂಸದರು ರೈತರ ಪ್ರತಿಭಟನಾ ಸ್ಥಳಕ್ಕೆ ಕಳೆದ ನವೆಂಬರ್ ತಿಂಗಳಲ್ಲಿ ಬಂದು ಬೆಂಬಲ ಸೂಚಿಸಿದ್ದರು.