ಹಿಜಾಬ್ ವಿವಾದ ಮತ್ತಷ್ಟು ಕಠಿಣವಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರತಿಕ್ರಿಯಿಸಿದ್ದು, ನಿಮಗೆ ಪಾಠ ಬೇಕಾದರೆ ಸಮವಸ್ತ್ರ ಧರಿಸಿಯೇ ಶಾಲೆಗೆ ಬರಬೇಕು. ಕೇಸರಿ ಶಾಲು, ಹಸಿರು ಶಾಲು ಯಾವುದನ್ನೂ ಧರಿಸಿ ಬಂದರೂ ಅವರಿಗೆ ತರಗತಿಗೆ ಅವಕಾಶ ಇಲ್ಲ ಎಂದು ಹಿಜಾಬ್ ವಿವಾದ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ನಿಮ್ಮ ಮಸೀದಿ ಒಳಗೆ ನಿಮಗೆ ಪ್ರವೇಶವಿಲ್ಲ. ಇದರ ವಿರುದ್ದ ಹೋರಾಟ ಮಾಡಿ. ನಿಮ್ಮ ಹಕ್ಕುಗಳಿಗಾಗಿ ಅಲ್ಲಿ ಧ್ವನಿ ಎತ್ತಿ. ಶಿಕ್ಷಣ ವ್ಯವಸ್ಥೆ ಒಳಗಡೆ ಈ ಹೋರಾಟ ಮಾಡಬೇಡಿ ನಿಮಗೆ ಪಾಠ ಬೇಕಾದರೆ ಸಮವಸ್ತ್ರ ಧರಿಸಿಯೇ ಶಾಲೆಗೆ ಬರಬೇಕು. ಶಾಲಾ ಆವರಣದ ಗೇಟ್ ವರೆಗೂ ಹಿಜಾಬ್ ಧರಿಸಿ ಬನ್ನಿ, ನಮ್ಮ ತಕಾರಾರಿಲ್ಲ. ಅದರೆ ಶಿಕ್ಷಣ ವ್ಯವಸ್ಥೆ ಒಳಗಡೆ ಈ ಹೋರಾಟ ಮಾಡಬೇಡಿ. ಕೋಲಾರದಲ್ಲಿ ನಮಾಜ್ ಕೂಡ ಮಾಡಿದ್ದಾರೆ. ಇಂತದ್ದಕ್ಕೆಲ್ಲಾ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
ಕುಂದಾಪುರದಲ್ಲಿ ಇಂದು ಹಿಜಾಬ್ ಧರಿಸಿ ಬಂದವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ. ಆ ಕೊಠಡಿಯಲ್ಲಿ ಯಾವ ಕ್ಲಾಸ್ಗಳು ನಡೆಯುತ್ತಿಲ್ಲ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ರಸ್ತೆಯಲ್ಲಿ ನಿಲ್ಲುವುದು ಬೇಡವೆಂದು ಕೊಠಡಿಯಲ್ಲಿ ಕೂರಿಸಿದ್ದೇವೆ. ವಿದ್ಯಾರ್ಥಿನಿಯರನ್ನ ರಸ್ತೆಯಲ್ಲಿ ನಿಲ್ಲಿಸಲು ಇದು ಪಾಕಿಸ್ತಾನ ಅಲ್ಲ. ಅವರು ನಮ್ಮ ಮಕ್ಕಳು. ಅವರು ತುಂಬಾ ಮುಗ್ಧತೆ ಇರುವ ಹೆಣ್ಣುಮಕ್ಕಳು.ಹೆಣ್ಣುಮಕ್ಕಳ ಮುಗ್ದತೆಯನ್ನ ಕೆಲ ರಾಜಕಾರಣಿಗಳು ದುರುಪಯೋಗ ಪಡಿಸಿಕಪಳ್ಳುತ್ತಿದ್ದಾರೆ. ಮುಗ್ಧ ವಿದ್ಯಾರ್ಥಿನಿಯರಿಗೆ ಶಾಲೆಯ ಒಳಗೆ ಕೊಠಡಿಯಲ್ಲಿ ಕೂರಿಸಿ ಬುದ್ಧಿ ಹೇಳುತ್ತೇವೆ. ಇದು ಧರ್ಮದ ಶಿಕ್ಷಣವಲ್ಲ. ಇದನ್ನ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಅರ್ಥ ಮಾಡಿಕೊಳ್ಳಬೇಕು. ನಾಳೆಯ ನ್ಯಾಯಾಲಯದ ಆದೇಶವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಅದರ ಆಧಾರದ ಮೇಲೆ ಶಿಕ್ಷಣ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಬಿಸಿ ನಾಗೇಶ್ ತಿಳಿಸಿದರು.