Mumbai: ಅಯೋಧ್ಯೆ #Ayodhya ಯಲ್ಲಿ ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿಯಿರುವ ಬೆನ್ನಲ್ಲೇ ರಾಜಕೀಯವಾಗಿ ಸಾಕಷ್ಟು ವಾದ ವಿವಾದಗಳು ನಡೆಯುತ್ತಿದ್ದು, ಎನ್ಸಿಪಿ ನಾಯಕ ಹಾಗೂ ಮಾಜಿ ಸಚಿವ ಜಿತೇಂದ್ರ ಅವ್ಹಾದ್ (Jitendra Awhad) ಅವರು ‘ಶ್ರೀ ರಾಮ ಮಾಂಸಾಹಾರಿಯಾಗಿದ್ದ’ ಎಂಬ ಹೇಳಿಕೆ ಎಲ್ಲೆಡೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಅವರು ನೀಡಿದ್ದ ಹೇಳಿಕೆಗೆ ಗುರುವಾರ ಕ್ಷಮೆ ಕೋರಿದ್ದಾರೆ.
![Statement Viral](https://sp-ao.shortpixel.ai/client/to_webp,q_glossy,ret_img,w_408,h_306/https://vijayatimes.com/wp-content/uploads/2024/01/jitendra-awhad-on-lord-ram-01-106528883.webp)
“ರಾಮ ನಮ್ಮವನು. ಆತ ಬಹುಜನ ಸಮುದಾಯದವನು. ರಾಮ ಬೇಟೆಯಾಡಿ ಊಟ ಮಾಡುತ್ತಿದ್ದ. ನಾವು ಸಸ್ಯಾಹಾರಿಗಳಾಗಬೇಕು ಎಂದು ನೀವು ಬಯಸುತ್ತಿದ್ದೀರಿ. ಆದರೆ ನಾವು ಆತನನ್ನು ನಮ್ಮ ಆದರ್ಶ ಎಂದು ಪರಿಗಣಿಸಿ ಮಟನ್ ಸೇವಿಸುತ್ತೇವೆ. ರಾಮ ಸಸ್ಯಾಹಾರಿಯಾಗಿರಲಿಲ್ಲ, ಆತ ಮಾಂಸಾಹಾರಿಯಾಗಿದ್ದ” ಎಂದು ಮಹಾರಾಷ್ಟ್ರ (Maharashtra)ದ ಶಿರಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶರದ್ ಪವಾರ್ ಬಣದ (Sharad Pawar faction) ನಾಯಕ ಜಿತೇಂದ್ರ ಅವ್ಹಾದ್ ಹೇಳಿದ್ದರು.
ಆದರೆ ನಾನು ಯಾವುದನ್ನೂ ಸಂಶೋಧನೆ ಮಾಡದೆ ಹೇಳುವುದಿಲ್ಲ ಎಂದಿರುವ ಅವರು, ಹಿಂದೂ ಮಹಾ ಪುರಾಣ ರಾಮಾಯಣವು ಹೇಳಿರುವುದನ್ನು ಉಲ್ಲೇಖಿಸಿದೆ ಎಂದಿದ್ದಾರೆ. ರಾಮನ ವನವಾಸದ ಅವಧಿಯನ್ನು ಉಲ್ಲೇಖಿಸಿದ್ದ ಅವರು, “14 ವರ್ಷ ಕಾಡಿನಲ್ಲಿ ಕಳೆದ ವ್ಯಕ್ತಿಯು ಸಸ್ಯಾಹಾರವನ್ನು ಎಲ್ಲಿಂದ ಪಡೆಯಲು ಸಾಧ್ಯ?” ಎಂದು ಪ್ರಶ್ನಿಸಿದ್ದರು.
ದೇಶದ ಶೇ 80ರಷ್ಟು ಜನಸಂಖ್ಯೆ ಈಗಲೂ ಮಾಂಸಾಹಾರಿಗಳಾಗಿದ್ದಾರೆ ಮತ್ತು ಅವರು ಶ್ರೀ ರಾಮನ ಭಕ್ತರೂ ಹೌದು” ಆದರೆ ಭಾರತವನ್ನು ಸಸ್ಯಾಹಾರಿ ದೇಶವನ್ನಾಗಿ ಮಾಡುವ ಪ್ರಯತ್ನ ನಡೆದಿದೆ ಎಂದಿದ್ದರು.
![BJP Rama](https://sp-ao.shortpixel.ai/client/to_webp,q_glossy,ret_img,w_476,h_267/https://vijayatimes.com/wp-content/uploads/2024/01/Jitendra-1200-1.webp)
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಕೆಲವು ದಿನಗಳ ಮುಂಚೆ ಅವರು ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ್ದು, ಅವ್ಹಾದ್ ಅವರನ್ನು ಟೀಕಿಸಿರುವ ಬಿಜೆಪಿ (BJP), ಶ್ರೀ ರಾಮನ ವಿರುದ್ಧ ‘ಆಕ್ಷೇಪಾರ್ಹ ಹೇಳಿಕೆ’ ನೀಡಿದ ಆರೋಪದಡಿ ಅವರ ವಿರುದ್ಧ ದೂರು ನೀಡಿದೆ.
ನೋವಾಗಿದ್ದರೆ ಕ್ಷಮೆ ಯಾಚಿಸುವೆ
ಗುರುವಾರ ಪ್ರತಿಕ್ರಿಯೆ ನೀಡಿರುವ ಅವ್ಹಾದ್, “ನಾನು ಯಾವುದನ್ನೂ ಸಂಶೋಧನೆ ಮಾಡದೆ ಮಾತನಾಡುವುದಿಲ್ಲ. ನಾನು ತೀವ್ರಗೊಳಿಸಲು ಬಯಸುವುದಿಲ್ಲ. ಆದರೆ ನಾನು ಹೇಳಿದ್ದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ನಾನು ಭಾಷಣ ಮಾಡಿದ ಹಲವಾರು ಸಂದರ್ಭಗಳಿವೆ. ನನ್ನ ಭಾಷಣದಲ್ಲಿ ನಾನು ಯಾವುದನ್ನೂ ತಿರುಚಿಲ್ಲ. ನಾನು ಈ ವಿಚಾರವನ್ನು ಮತ್ತಷ್ಟು ಬೆಳೆಯಲು ಬಯಸುವುದಿಲ್ಲ. ಆದರೆ ವಾಲ್ಮೀಕಿ ರಾಮಾಯಣದಲ್ಲಿ, ಅನೇಕ ಕಾಂಡಗಳಿವೆ. ಅಯೋಧ್ಯಾ ಕಾಂಡದ 102ನೇ ಶ್ಲೋಕದಲ್ಲಿ ಅದನ್ನು ಉಲ್ಲೇಖಿಸಲಾಗಿದೆ” ಎಂದು ಹೇಳಿದ್ದಾರೆ.
ಭವ್ಯಶ್ರೀ ಆರ್ ಜೆ