Panaji: ಕೆಲ ದಿನಗಳ ಹಿಂದಷ್ಟೇ ಕರ್ನಾಟಕ (Karnataka) ರಾಜ್ಯದ ವಿರುದ್ಧ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಗೋವಾ ಸರ್ಕಾರ ಇದೀಗ ಕನ್ನಡಿಗರ ಮೇಲೆ ದೌರ್ಜನ್ಯಕ್ಕೆ ಮುಂದಾಗಿದೆ.ಗೋವಾ ಸರ್ಕಾರ ಇಲ್ಲಿನ ವಲಸೆ ಕನ್ನಡಿಗರ ಒಕ್ಕಲೆಬ್ಬಿಸುವ ಕಾರ್ಯವನ್ನು ಮತ್ತೆ ಮುಂದುವರಿಸಿದ್ದು, ಉತ್ತರ ಗೋವಾದ (Goa) ಸಾಂಗೋಲ್ಡಾ ಪ್ರದೇಶದಲ್ಲಿರುವ ಕನ್ನಡಿಗರ 15 ಮನೆಗಳನ್ನು ಜೆಸಿಬಿ (JCB) ಬಳಸಿ ನೆಲಸಮಗೊಳಿಸಿದೆ.
ಇನ್ನು ಈ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಕನ್ನಡಿಗರು ನಾಲ್ಕು ದಶಕಗಳಿಂದ ಇಲ್ಲಿ ವಾಸವಾಗಿದ್ದೇವೆ. ಈಗ ಇದ್ದಕ್ಕಿದ್ದಂತೆ ಎದ್ದು ಹೋಗಿ ಎಂದರೆ ನಾವು ಎಲ್ಲಿಗೆ ಹೋಗಬೇಕು ಎಂದು ಬೇಸರ ತೋಡಿಕೊಂಡಿದ್ದಾರೆ.ಇನ್ನು ಕಾರ್ಯಾಚರಣೆಗೆ ಪ್ರತಿರೋಧ ಒಡ್ಡಿದವರ ಮೇಲೆ ಪೊಲೀಸರು ಲಾಠಿ ಬೀಸಿ ಮನೆಯಿಂದ ಹೊರಗೆ ಓಡಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಧ್ವಂಸವಾದ ಮನೆಗಳ ಕಂಡು ಗೋವ ಕನ್ನಡಿಗರು ರೋಧಿಸುತ್ತಿದ್ದಾರೆ. ದವಸ-ಧಾನ್ಯ, ಬಟ್ಟೆ-ಹಾಸಿಗೆಗಳೂ ಮನೆಯ ಅವಶೇಷಗಳ ಅಡಿ ಸಿಲುಕಿವೆ. ಯಾರೋ ಕೊಟ್ಟ ತಿಂಡಿ, ಊಟ ಸೇವಿಸುತ್ತ ದಿಕ್ಕುಗಾಣದೇ ಕಣ್ಣೀರಿಡುತ್ತಿದ್ದಾರೆ.
ಈ ಕನ್ನಡಿಗರ ಮನೆಗಳನ್ನು ಧ್ವಂಸ ಮಾಡಿದ ವಿಷಯ ತಿಳಿದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ಮಾಡಿಕೊಂಡ ಮನವಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ ಸ್ಪಂದಿಸಿದ್ದಾರೆ. ಸಂತ್ರಸ್ತರಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಬೀದಿಪಾಲಾಗಿರುವ ಸಂತ್ರಸ್ತರಿಗೆ ಈಗ ತಾತ್ಕಾಲಿಕ ನೆರವನ್ನೂ ನೀಡದೆ ಹಾರಿಕೆಯ ಉತ್ತರ ನೀಡುತ್ತಿದೆ.
ಇನ್ನು ಗೋವಾ ನಿವಾಸಿ ಕನ್ನಡಿಗರನ್ನು ಇಲ್ಲಿನ ಸರ್ಕಾರ ನಿರ್ದಯವಾಗಿ ಒಕ್ಕಲೆಬ್ಬಿಸುತ್ತಿರುವುದು ಇದು ಮೊದಲ ಬಾರಿಯಲ್ಲ ಬದಲಾಗಿ ಆರನೇ ಬಾರಿ. ಹೀಗೆ ಬೀದಿಗೆ ತಳ್ಳಿದವರಿಗೆ ಈವರೆಗೆ ಯಾವುದೇ ಪುನರ್ವಸತಿ ಕಲ್ಪಿಸಿಲ್ಲ. ಮೊದಲು ಪುನರ್ವಸತಿ ಕಲ್ಪಿಸಿ, ಬಳಿಕ ಅತಿಕ್ರಮಣ ತೆರವುಗೊಳಿಸಿ ಎಂದು ನ್ಯಾಯಾಲಯ ನಿರ್ದೇಶನ ನೀಡಿದರೂ ನ್ಯಾಯಾಲಯದ ಆದೇಶ ಕಡೆಗಣಿಸಿದೆ.