ಬೆಂಗಳೂರು, ಮಾ. 09: ಅಕ್ರಮ ಸಂಪತ್ತಿನ ಎಣಿಕೆ ಕಾರ್ಯದಲ್ಲಿ ಎಸಿಬಿ ಅಧಿಕಾರಿಗಳು ತೊಡಗಿದ್ದಾರೆ. ಎಸಿಬಿ ಅಧಿಕಾರಿಗಳು ರಾಜ್ಯದ 11 ಜಿಲ್ಲೆಗಳಲ್ಲಿ 9 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನಾಭರಣ, ಹಣ ಸೇರಿದಂತೆ ವಿವಿಧೆಡೆ ಅಕ್ರಮವಾಗಿ ಸಂಪಾದಿಸಿದ್ದ ಚರ ಹಾಗೂ ಸ್ಥಿರ ಆಸ್ತಿಗಳನ್ನು ಪತ್ತೆಹಚ್ಚಿದ್ದಾರೆ. ಈ ವರ್ಷದಲ್ಲಿ ನಡೆದ ಅತ್ಯಂತ ದೊಡ್ಡ ಕಾರ್ಯಾಚರಣೆ ಇದಾಗಿದ್ದು, ಸುಮಾರು 52 ಅಧಿಕಾರಿಗಳು, 174 ಸಿಬ್ಬಂದಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ನಂತರ ಈ ದಾಳಿ ನಡೆಸಲಾಗಿದೆ ಎಂದು ಎಸಿಬಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದು, ಪ್ರಾಥಮಿಕ ಹಂತದಲ್ಲಿ ದೊರೆತಿರುವ ಅಪಾರ ಪ್ರಮಾಣದ ಅಕ್ರಮ ಸಂಪತ್ತನ್ನು ಕಂಡು ಬೆಚ್ಚಿಬೀಳುವಂತಾಗಿದೆ.
ವಿಕ್ಟರ್ ಸಿಮನ್, ಪೊಲೀಸ್ ಇನ್ಸ್ಪೆಕ್ಟರ್, ಬಿಎಂಟಿಎಫ್-ಬೆಂಗಳೂರು.
ಕೆ.ಸುಬ್ರಹ್ಮಣ್ಯಂ, ಕಿರಿಯ ಇಂಜಿನಿಯರ್, ನಗರ ಯೋಜನಾ ಕಚೇರಿ, ಸಹಾಯಕ ನಿರ್ದೇಶಕ, ಬಿಬಿಎಂಪಿ-ಯಲಂಹಕ ವಲಯ. ಕೃಷ್ಣೇಗೌಡ, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ-ಚಿಕ್ಕಬಳ್ಳಾಪುರ. .ಹನುಮಂತ ಶಿವಪ್ಪ ಚಿಕ್ಕನವರ್, ಉಪ ಮುಖ್ಯ ವಿದ್ಯುತ್ ನಿರೀಕ್ಷಕ-ಬೆಳಗಾವಿ ವಲಯ. ಸುಬ್ರಹ್ಮಣ್ಯ ವಿ.ವದಾರ್, ಜಂಟಿ ನಿರ್ದೇಶಕರು, ಪಟ್ಟಣ ಮತ್ತು ದೇಶ ಯೋಜನೆ-ಮೈಸೂರು. ಮುನಿಗೋಪಾಲ್ ರಾಜ್, ಅಧೀಕ್ಷಕ ಎಂಜಿನೀಯರ್, ಚೆಸ್ಕಾಂ-ಮೈಸೂರು. ಚನ್ನವೀರಪ್ಪ, ಪ್ರಥಮ ದರ್ಜೆ ಸಹಾಯಕರು ಆರ್ಟಿಒ ಕಚೇರಿ- ಮೈಸೂರು.
ರಾಜು ಪತಾರ್, ಲೆಕ್ಕಾಕಾರಿ, ಜಿಸ್ಕಾಂ- ಯಾದಗಿರಿ. ವಿಕ್ಟರ್ ಸಿಮನ್, ಪೊಲೀಸ್ ಇನ್ಸ್ಪೆಕ್ಟರ್, ಬಿಎಂಟಿಎಫ್-ಬೆಂಗಳೂರು. ಕೆ.ಎಂ.ಪ್ರಥಮ್, ಉಪನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ಸ್ – ದಾವಣಗೆರೆ ವಲಯ. ಚಿಕ್ಕಬಳ್ಳಾಪುರ ಜಿಲ್ಲೆಯ ಕೋಲಾರ ತಾಲ್ಲೂಕಿನಲ್ಲಿ ಕೃಷ್ಣೇಗೌಡ ಅವರ ನಿವಾಸ ಹಾಗೂ ಅವರ ಸಹೋದರನ ಮನೆ ಮೇಲೆ ಎಸ್ಪಿ ಕಲಾ ಕೃಷ್ಣಮೂರ್ತಿ ನೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಹಲವು ದಾಖಲೆ, ನಿವೇಶನಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿಯ ವಿದ್ಯುತ್ ಇನ್ಸ್ಪೆಕ್ಟರ್ ಅವರ ಹನುಮಂತ ಶಿವಪ್ಪ ಚಿಕ್ಕನವರ್ ಅವರ ಅಂಗೋಲಾದ ಚನ್ನಮ್ಮ ನಗರದಲ್ಲಿರುವ ಪ್ಲಾಟ್ ಹಾಗೂ ಐಷಾರಾಮಿ ಮನೆಗಳ ಮೇಲೆ ಎಸ್ಪಿ ನೇಮಗೌಡ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಆಭರಣ, ವಿವಿಧೆ ಕಡೆ ಇದ್ದ ಅಪಾರ್ಟ್ಮೆಂಟ್ನಲ್ಲಿ ಖರೀದಿಸಿದ್ದ ಫ್ಲಾಟ್, ವಿವಿಧ ಬ್ಯಾಂಕುಗಳ ಎಫ್ಡಿ ಹಾಗೂ ಅಪಾರ ಪ್ರಮಾಣದ ಆಸ್ತಿ ಪತ್ರಗಳನ್ನು ಪತ್ತೆಹಚ್ಚಲಾಗಿದೆ.
ಬೆಳಗ್ಗೆ ಅಧಿಕಾರಿಗಳು ಕದ ತಟ್ಟುತಿದ್ದಂತೆ ಶಿವಪ್ಪ ಅವರು ದಂಗಾಗಿದ್ದಾರೆ. ಎಸಿಬಿ ಅಧಿಕಾರಿಗಳೆಂದು ತಿಳಿಯುತ್ತಿದ್ದಂತೆ ಗಲಿಬಿಲಿಗೊಂಡು ತನಿಖೆಗೆ ಸ್ಪಂದಿಸಿದ್ದಾರೆ. ಮನೆಯೆಲ್ಲಾ ಜಾಲಾಡಿದಾಗ ಐಷಾರಾಮಿ ವಸ್ತುಗಳು ಪತ್ತೆಯಾಗಿದ್ದು, ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ.
ಜಮಖಂಡಿ ತಾಲ್ಲೂಕು ಸೇರಿದಂತೆ ಹಲವೆಡೆ ಮನೆಗಳನ್ನು ಖರೀದಿಸಿರುವುದು ಕೂಡ ಪತ್ತೆಯಾಗಿದೆ. ಮೈಸೂರಿನಲ್ಲಿ ಮೂರು ಕಡೆ ದಾಳಿ ನಡೆದಿದ್ದು, ಸರ್ಕಾರಿ ಅಧಿಕಾರಿಗಳನ್ನು ದಂಗು ಬಡಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸಾಂಸ್ಕøತಿಕ ನಗರಿಯಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಮೈಸೂರು ನಗರ ಯೋಜನಾ ಅಧಿಕಾರಿ ಸುಬ್ರಹ್ಮಣ್ಯ ಅವರು ಮೂಲತಃ ಉಡುಪಿಯವರಾಗಿದ್ದು, ಮೈಸೂರಿನಲ್ಲಿರುವ ಅವರ ಬಾಡಿಗೆ ಮನೆ , ಉಡುಪಿಯಲ್ಲಿರುವ ಸ್ವಂತ ಮನೆ ಹಾಗೂ ಕಾರವಾರದಲ್ಲಿರುವ ತಾಯಿ ಮನೆ ಮೇಲೂ ಕೂಡ ದಾಳಿ ನಡೆಸಲಾಗಿದೆ. ದಕ್ಷಿಣ ವಲಯ ಎಸ್ಪಿ ಬೋಪಯ್ಯ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.
ಮೈಸೂರು ಎಫ್ಡಿಎ ಅಧಿಕಾರಿ ಚನ್ನವೀರಪ್ಪ ಅವರ ಕುವೆಂಪುನಗರದ ಮನೆ ಹಾಗೂ ಸ್ವಂತ ಗ್ರಾಮ ಆಲಕೆರೆ ನಿವಾಸದ ಮನೆಗಳ ಮೇಲೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಸೇರಿದಂತೆ ಭೂಮಿ ಮತ್ತು ನಿವೇಶನದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಎಸಿಬಿ ಎಸ್ಪಿ ಅರುಣಾಂಗೋಸ್ ಮತ್ತು ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಮೈಸೂರಿನ ಮತ್ತೊಬ್ಬ ಅಧಿಕಾರಿ ಚೆಸ್ಕಾಂನ ಅಧೀಕ್ಷಕ ಇಂಜಿನಿಯರ್ ಮುನಿಗೋಪಾಲ್ ರಾಜು ಅವರ ಗೋಕುಲಂನಲ್ಲಿರುವ ನಿವಾಸ, ಸ್ವಂತ ಊರಾದ ಕನಕಪುರದಲ್ಲಿರುವ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಎಸ್ಪಿ ಅರುಣಗಲು ಗಿರಿ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಇವರ ನಿವಾಸದಲ್ಲಿ ಕಚೇರಿಗೆ ಸಂಬಂಸಿದ ಕೆಲವು ದಾಖಲಿಗಳು ಪತ್ತೆಯಾಗಿವೆ.
ಫೈಲ್ಗಳು ಮತ್ತು ಕೆಲವು ಡಿಡಿಗಳು ಸಿಕ್ಕಿದ್ದು, ಇಲ್ಲಿಗೆ ಏಕೆ ತರಲಾಗಿತ್ತು ಎಂಬುದರ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಕೆಲವು ಆಸ್ತಿ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಎಸ್ಪಿ ಮಹೇಶ್ ಅವರ ನೇತೃತ್ವದಲ್ಲಿ ಯಾದಗಿರಿ ವಲಯದ ಜಿಸ್ಕಾಂನ ಲೆಕ್ಕಾಧಿಕಾರಿ ರಾಜು ಪತಾರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಚಿನ್ನಾಭರಣ, ಹಲವು ಬ್ಯಾಂಕ್ಗಳ ಪಾಸ್ಬುಕ್ಗಳು , ಲಾಕರ್ ಹೊಂದಿರುವುದನ್ನೂ ಪತ್ತೆಹಚ್ಚಲಾಗಿದೆ.
ಅಧಿಕೃತ ಮಾಹಿತಿ ಸಿಗಬೇಕಾಗಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಂಡು ಪತ್ತೆ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಭ್ರಷ್ಟಾಚಾರ ಪತ್ತೆಹಚ್ಚುವ ಬಿಎಂಟಿಎಫ್ನ ಇನ್ಸ್ಪೆಕ್ಟರ್ ವಿಕ್ಟರ್ ಸಿಮನ್ ಕೂಡಾ ಎಸಿಬಿ ಬಲೆಗೆ ಬಿದ್ದಿದ್ದಾರೆ. ನಗರದ ಕಸವನಹಳ್ಳಿಯಲ್ಲಿರುವ ಅವರ ನಿವಾಸ ಹಾಗೂ ಮೈಸೂರಿನಲ್ಲಿರುವ ಮಾವನ ಮನೆ ಮೇಲೆ ದಾಳಿ ನಡೆಸಲಾಗಿದೆ. ಇಲ್ಲೂ ಕೂಡ ಅಪಾರ ಪ್ರಮಾಣದ ಚರ ಹಾಗೂ ಸ್ಥಿರ ಆಸ್ತಿಗಳು ಪತ್ತೆಯಾಗಿವೆ.
ಎಸ್ಪಿ ಕುಲ್ದೀಪ್ಕುಮಾರ್ ಜೈನ್ ಅವರ ನೇತೃತ್ವದಲ್ಲಿ ಬಿಬಿಎಂಪಿಯ ಯಲಹಂಕ ವಲಯ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ಕೆ.ಸುಬ್ರಹ್ಮಣ್ಯಂ ಅವರ ಶಂಕರನಗರದ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದು, ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗಷ್ಟೇ ಇವರು ಭರ್ಜರಿ ಮನೆಯನ್ನು ಖರೀದಿಸಿದ್ದರು ಎಂದು ತಿಳಿದು ಬಂದಿದೆ. ಹಲವು ಬ್ಯಾಂಕ್ಗಳಲ್ಲಿ ಹೂಡಿಕೆ, ಷೇರು ಇತರೆ ಆಸ್ತಿ ದಾಖಲೆಗಳನ್ನು ಪತ್ತೆಹಚ್ಚಲಾಗಿದೆ. ಐಷಾರಾಮಿ ಮನೆ ನೋಡಿ ಅಧಿಕಾರಿಗಳೇ ಬೆರಗಾಗಿದ್ದಾರೆ.
ಯಾವ ಕೋಣೆ ಎಲ್ಲಿಗೆ ಹೋಗುತ್ತದೆ ಎಂಬುದೇ ಆರಂಭದಲ್ಲಿ ತಿಳಿಯಲಿಲ್ಲ. ಆದರೂ ಕೂಡ ಸಿಬ್ಬಂದಿಗಳು ಇಂಚಿಂಚೂ ತಡಕಾಡಿ ಅಕ್ರಮ ಸಂಪತ್ತನ್ನು ಪತ್ತೆಹಚ್ಚಿದ್ದಾರೆ.
ದಾವಣಗೆರೆಯಲ್ಲಿ ಎಸ್ಪಿ ಜಯಪ್ರಕಾಶ್ ಅವರ ನೇತೃತ್ವದಲ್ಲಿ ಉಪ ನಿರ್ದೇಶಕ ಕೆ.ಎಂ.ಪ್ರಥಮ್ ಅವರ ಬೆಂಗಳೂರಿನ ನಾಗಶೆಟ್ಟಿಹಳ್ಳಿ ನಿವಾಸ ಮತ್ತು ಸಂಜಯನಗರದಲ್ಲಿರುವ ಸಹೋದರನ ಮನೆ ಮೇಲೆ ದಾಳಿ ನಡೆಸಲಾಗಿದೆ.
ಇದಲ್ಲದೆ ದಾವಣಗೆರೆಯ ಅವರ ಕಚೇರಿ ಮೇಲೂ ದಾಳಿ ನಡೆಸಲಾಗಿದೆ. ದಾವಣಗೆರೆಯಲ್ಲೂ ಕೂಡ ಇವರು ಮನೆ ಹೊಂದಿದ್ದಾರೆ ಎಂಬ ಮಾಹಿತಿ ಇದ್ದು, ತನಿಖೆ ಚುರುಕುಗೊಂಡಿದೆ. ಇವರ ನಿವಾಸದಲ್ಲೂ ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿ ಪತ್ರಗಳು ಪತ್ತೆಯಾಗಿವೆ. ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದು, ಭ್ರಷ್ಟ ಅಧಿಕಾರಿಗಳನ್ನು ಅವರ ಅಕ್ರಮ ಆಸ್ಥಿಗಳನ್ನೂ ಪತ್ತೆ ಹಚ್ಚಿದ್ದಾರೆ.